ಮಂಗಳೂರು: ಸಿಸಿಟಿವಿ ಕಂಟ್ರೋಲ್ ರೂಂ.ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2.10 ಲಕ್ಷ ರೂ. ಪಡೆದು ವಂಚನೆ ಮಾಡಿರುವ ಕುರಿತಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗರೆ ನಿವಾಸಿ ಅಹಮ್ಮದ್ ಹುಸೈನ್ ಎಂಬಾತ ವಂಚಿಸಿದಾತ. ಪಾಂಡೇಶ್ವರ ಬಳಿ ಜಿಮ್ ನಡೆಸುತ್ತಿರುವ ನಿಸಾರ್ ಅಹಮ್ಮದ್ ಮತ್ತು ಅಬ್ದುಲ್ ಶುಕೂರು ವಂಚನೆಗೆ ಒಳಗಾದವರು. ಮಂಗಳೂರಿನ ಸಿಸಿಟಿವಿ ಕಂಟ್ರೋಲ್ ರೂಂ.ನಲ್ಲಿ ಸಿಸಿ ಟಿವಿ ಆಪರೇಟರ್ ಉದ್ಯೋಗವಿದ್ದು, ಉದ್ಯೋಗಿಗಳು ಟ್ರಾಫಿಕ್ ರೂಲ್ಸ್ ಉಲ್ಲಂ ಸಿದವರ ಫೋಟೋ ತೆಗೆದು ಅವರಿಗೆ ನೋಟಿಸ್ ಜಾರಿ ಮಾಡುವ ಕೆಲಸ ಮಾಡಬೇಕು. ಒಟ್ಟು 17 ಹುದ್ದೆ ಇದ್ದು, ತಿಂಗಳಿಗೆ 38,500 ರೂ. ಸಂಬಳ ಎಂದು ನಂಬಿಸಿದ್ದ. ಉದ್ಯೋಗಕ್ಕೆ ಸೇರಲು 1 ಲಕ್ಷ ರೂ. ಠೇವಣಿ ಮತ್ತು ದಾಖಲಾತಿ ಪರಿಶೀಲನೆಗೆ 5 ಸಾವಿರ ರೂ. ಸೇರಿ ಒಟ್ಟು 1.05 ಲಕ್ಷ ರೂ. ನೀಡಬೇಕು ಎಂದು ಹುಸೈನ್ ತಿಳಿಸಿದ್ದ. ಆತನ ಮಾತನ್ನು ನಂಬಿದ ಈ ಇಬ್ಬರು, ತಲಾ 1.05 ಲಕ್ಷ ರೂ. ಪಾವತಿಸಿದ್ದರು.
ಹುಸೈನ್ ದಿನಕ್ಕೊಂದು ಕಾರಣ ಹೇಳಿ ಉದ್ಯೋಗ ಕೊಡಿಸದೇ, ಹಣವನ್ನೂ ವಾಪಸು ನೀಡದೆ ವಂಚಿಸಿದ್ದಾನೆ ಎಂದು ಪಾಂಡೇಶ್ವರ ಠಾಣೆಗೆ ದೂರು ನೀಡಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Follow us on Social media