ನವದೆಹಲಿ: ಲೆಬನಾನ್ ನಲ್ಲಿ ಸಂಭವಿಸಿರುವ ಸ್ಫೋಟದಲ್ಲಿ ಐವರು ಭಾರತೀಯರಿಗೆ ಸಣ್ಣ-ಪುಟ್ಟ ಗಾಯಗಳುಂಟಾಗಿವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ಈ ಬಗ್ಗೆ ಮಾತನಾಡಿದ್ದು, ಸ್ಫೋಟದಿಂದ ಉಂಟಾಗಿರುವ ಹಾನಿಯ ಕುರಿತು ಲೆಬನೀಸ್ ಸರ್ಕಾರದಿಂದ ಮಾಹಿತಿ ಕೇಳಿದ್ದೇವೆ, ಮಾಹಿತಿ ಬಂದ ಬಳಿಕ ಯಾವ ಪ್ರಕಾರದ ನೆರವು ನೀಡಬೇಕೆಂಬುದನ್ನು ನಿರ್ಧರಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಅಲ್ಲಿರುವ ಭಾರತೀಯ ಸಮುದಾಯದವರಿಗೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ ಎಂದು ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.
ನಮ್ಮ ರಾಯಭಾರ ಕಚೇರಿ ಭಾರತೀಯ ಸಮುದಾಯ ಹಾಗೂ ಅದಕ್ಕೆ ಸಂಬಂಧಪಟ್ಟವರೊಂದಿಗೆ ಸಂಪರ್ಕದಲ್ಲಿದ್ದು ಅಗತ್ಯ ನೆರವು ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ. ಮಂಗಳವಾರ ಲೆಬನಾನ್ ನ ರಾಜಧಾನಿ ಬೈರುತ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ 130 ಜನರು ಮೃತಪಟ್ಟಿದ್ದು ಸಾವಿರಾರು ಮಂದಿಗೆ ಗಾಯಗಳುಂಟಾಗಿವೆ.
Follow us on Social media