Breaking News

ಮಾಜಿ ಕೇಂದ್ರ ಸಚಿವ ಅರ್ಜುನ್ ಚರಣ್ ಸೇಥಿ ನಿಧನ

ಭುವನೇಶ್ವರ : ಎಂಟು ಬಾರಿ ಒಡಿಶಾದ ಭದ್ರಕ್ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕೇಂದ್ರ ಸಚಿವ ಅರ್ಜುನ್ ಚರಣ್ ಸೇಥಿ, ಅಲ್ಪಕಾಲದ ಅಸ್ವಸ್ಥತೆ ಬಳಿಕ ಸೋಮವಾರ ರಾತ್ರಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ರವಿವಾರ ಸಂಜೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೇಥಿಯವರು 2000ದಿಂದ 2004ರವರೆಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಯುವಕರಾಗಿದ್ದಾಗಿನಿಂದಲೂ ಸಾಮಾಜಿಕ ಮತ್ತು ರಾಜಕೀಯ ವಲಯದಲ್ಲಿ ಸಕ್ರಿಯರಾಗಿದ್ದ ಅವರು, ಎರಡು ಬಾರಿ ಒಡಿಶಾ ವಿಧಾನಸಭೆಗೂ ಆಯ್ಕೆಯಾಗಿದ್ದರು. ಸೇಥಿಯವರು ಮುತ್ಸದ್ದಿ ರಾಜಕಾರಣಿ ಮತ್ತು ಸಮರ್ಥ ಆಡಳಿತಗಾರ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮ್ಮ ಶೋಕ ಸಂದೇಶದಲ್ಲಿ ಬಣ್ಣಿಸಿದ್ದಾರೆ.

ಅರ್ಜುನ್ ಚರಣ್ ತಮ್ಮ ನಿಸ್ವಾರ್ಥ ಸೇವೆ ಹಾಗೂ ಜನಪರ ಕಾಳಜಿಯ ಬಗೆಗಿನ ಬದ್ಧತೆಯಿಂದಾಗಿ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅಪಾರ ಜನಮೆಚ್ಚುಗೆ ಪಡೆದಿದ್ದರು. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಮೀರ್ ಮೊಹಾಂತಿ, ಮಾಜಿ ಕೇಂದ್ರ ಸಚಿವ ಶ್ರೀಕಾಂತ್ ಜೆನಾ ಮತ್ತಿತರರು ಸೇಥಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

1941ರ ಸೆಪ್ಟೆಂಬರ್ 18ರಂದು ಜನಿಸಿದ ಅವರು, ಭದ್ರಕ್ ಕ್ಷೇತ್ರದಿಂದ 1971ರಲ್ಲಿ ಮೊದಲ ಬಾರಿ ಲೋಕಸಭೆಗೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಅಯ್ಕೆಯಾಗಿದ್ದರು. 1980ರಲ್ಲೂ ಮತ್ತೆ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾದರು. 1991ರಲ್ಲಿ ಜನತಾದಳ, 1998, 1999, 2004, 2009ರಲ್ಲಿ ಬಿಜೆಡಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. 2019ರಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ವೇಳೆ ಬಿಜೆಡಿ ತೊರೆದು ಮಗ ಅಭಿಮನ್ಯು ಸೇಥಿ ಜತೆಗೆ ಬಿಜೆಪಿಗೆ ಪಕ್ಷಾಂತರ ಹೊಂದಿದ್ದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×