Breaking News

ಮಂಡ್ಯದ ‘ಆಧುನಿಕ ಭಗೀರಥ’ ಕಾಮೇಗೌಡರನ್ನು ಕೊಂಡಾಡಿದ ಪ್ರಧಾನಿ ಮೋದಿ.!

ಮಂಡ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಆಧುನಿಕ ಭಗೀರಥನೆಂದೇ ಖ್ಯಾತಿ ಪಡೆದಿರುವ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಕಾಮೇಗೌಡರನ್ನು ಕೊಂಡಾಡಿದ್ದಾರೆ.
 
ತಮ್ಮ 66ನೇ ಆವೃತ್ತಿಯ ಮನ್ ಕಿ ಬಾತ್ನಲ್ಲಿಂದು 82 ವಯಸ್ಸಿನ ಕಾಮೇಗೌಡರ ಸಾಧನೆಯನ್ನು ನೆನೆದು ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಬಾಯಾರಿದ ಪ್ರಾಣಿ-ಪಕ್ಷಿಗಳಿಗಾಗಿ ತನ್ನ ಸ್ವಂತ ಹಣದಿಂದ 16 ಕಟ್ಟೆಗಳನ್ನು ನಿರ್ಮಿಸಿ ಮಾದರಿಯಾಗಿರುವ ಕಾಮೇಗೌಡರನ್ನು ಪ್ರಧಾನಿ ಮೋದಿ ಇಂದಿನ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಂಡರು.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡರು, ತಂಡೆ ನೀಲಿ ವೆಂಕಟಗೌಡ. ತಾಯಿ ರಾಜಮ್ಮಅವರ ಪುತ್ರ, ಶಾಲೆಯ ಮೆಟ್ಟಿಲು ಹತ್ತಿ ಅಕ್ಷರ ಕಲಿಯದ ಕಾಮೇಗೌಡರು ತಮ್ಮ ಪರಿಸರ ಪ್ರೀತಿಯಿಂದಾಗಿಯೇ ಇತರರಿಗೆ ಮಾದರಿಯಾಗಿದ್ದಾರೆ.

ಚಿಕ್ಕಮನೆ, ತುಂಡು ಭೂಮಿ, ಒಂದಷ್ಟು ಕುರಿಗುಳು ಕಾಮೇಗೌಡರ ಆಸ್ತಿಯಾಗಿದೆ. ಕಾಡಿನಲ್ಲಿ ಕುರಿ ಮೇಯಿಸೋದೇ ಇವರ ಕಾಯಕ. ಹುಟ್ಟಿದಾಗಿನಿಂದಲೂ ಪರಿಸರದೊಂದಿಗೆ ತುಂಬಾ ಒಡನಾಟವಿಟ್ಟುಕೊಂಡಿರುವ ಅವರು, ಪರಿಸರಕ್ಕಾಗಿ ಜೀವನವಿಡೀ ದುಡಿದ ಹಣವನ್ನೇ ಖರ್ಚು ಮಾಡಿದ್ದಾರೆ. ಇದೂವರೆಗೂ 16 ಕೆರೆಗಳನ್ನು ನಿರ್ಮಿಸಿರುವ ಇವರು ವನ್ಯ ಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಜೊತೆಗೆ ಜಲ ಸಂರಕ್ಷಣೆಯನ್ನೂ ಮಾಡುತ್ತಿದ್ದಾರೆ.

ತಾನು ಕುರಿ ಕಾಯುತ್ತಿದ್ದ ಕುಂದೂರು ಬೆಟ್ಟ ಸದಾ ಹಸಿರಾಗಿರಬೇಕೆಂದು ಬೆಟ್ಟದ ಸುತ್ತ ೨ ಸಾವಿರಕ್ಕೂ ಅಧಿಕ ಗಿಡ ನೆಟ್ಟು ಬೆಳೆಸಿದ್ದಾರೆ. ತಾನು ನೆಟ್ಟ ಆ ಸಸಿಗಳು ಇಂದು ಮರವಾಗಿರುವುದನ್ನು ಕಂಡು ಆನಂದದಿಂದ ಸದಾ ಕಾಡಿನಲ್ಲಿ ಸುತ್ತಾಡುತ್ತಾರೆ. ಜೊತೆಗೆ  ತನ್ನ ತಿಳುವಳಿಕೆಗೆ ಬಂದ ಕೆಲವು ಉತ್ತಮ ಸಂದೇಶ ಮತ್ತು ಪರಿಸರ ಕಾಳಜಿ ಸಂದೇಶಗಳನ್ನು ಬೆಟ್ಟದ ಬಂಡೆಯ ಮೇಲೆ ಬಣ್ಣದಿಂದ ಬರೆಸೋ ಮೂಲಕ ಜನರಲ್ಲಿ ಪರಿಸರ ಕಳಕಳಿ ಮೂಡಿಸುತ್ತಿದ್ದಾರೆ.

ಕಾಮೇಗೌಡರ ಕಾರ್ಯವೈಖರಿಯನ್ನು ಮೆಚ್ಚಿ ಈಗಾಗಲೇ ಬಸವಶ್ರೀ, ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಹಲವಾರು ರಾಷ್ಟ್ರೀಯ ಮ್ತತು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರೆತಿವೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಕಾಮೇಗೌಡರ ಸೇವೆಯನ್ನು ಗುರ್ತಿಸಿ ಅಭಿನಂದಿಸಿದ್ದಾರೆ.

ಕಟ್ಟೆ ನಿರ್ಮಿಸಲು ಕಾಮೇಗೌಡರಿಗೆ ಪ್ರೇರಣೆ ಏನು?;
ಕುರಿಗಾಹಿಯಾಗಿರುವ ಕ್ಯಾಮೇಗೌಡ ಅವರು ಸುಮಾರು ೧೩ ವರ್ಷಗಳ ಹಿಂದೆ ಕುಂದೂರುಬೆಟ್ಟಕ್ಕೆ ಕುರಿ ಮೇಯಿಸಲು ಹೋಗಿದ್ದರು. ಆಗ ವಿಪರೀತ ದಾಹವಾಗಿ ನೀರಿಗಾಗಿ ಪರದಾಟಿದ್ದರು. ಬಳಿಕ ಸ್ವಲ್ಪ ದೂರದ ಮನೆಗೆ ಹೋಗಿ ನೀರು ಕೇಳಿಪಡೆದಿದ್ದರು. ನಾನು ದಾಹ ತೀರಿಸಿಕೊಂಡೆ ಆದ್ರೆ ಪ್ರಾಣಿಗಳ ಪರಿಸ್ಥಿತಿ ಏನು ಎನ್ನುವ ಚಿಂತೆ ಅವರಿಗೆ ಕಾಡಿತ್ತು. ಹೀಗಾಗಿ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು.

ಕ್ಯಾಮೇಗೌಡರು ಗುಡ್ಡದಲ್ಲಿ ಕೆರೆ ತೋಡುತ್ತಿದ್ದನ್ನ ಕಂಡು ಅನೇಕರು ಗೇಲಿ ಮಾಡಿದ್ದರು. ಇವನಿಗೆ ಹುಚ್ಚು ಹಿಡಿದಿದೆ, ಅದಕ್ಕೆ ಇಲ್ಲಿ ಕೆರೆ ತೋಡುತ್ತಿದ್ದಾನೆ ಎಂದು ಮಾತನಾಡಿದ್ದರು. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸವನ್ನು ಮುಂದುವರಿಸಿದ ಕ್ಯಾಮೇಗೌಡರು ಸದ್ಯ 16 ಕೆರೆಗಳನ್ನು ನಿರ್ಮಿಸಿದ್ದು ಪ್ರಧಾನಿ ಮೋದಿ,ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕ್ಯಾಮೇಗೌಡರು ತೋಡಿದ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಕೂಡ ನೀರು ತುಂಬಿರುತ್ತದೆ. ದಕ್ಷಿಣ ಕರ್ನಾಟಕದ ಇತರ ಭಾಗಗಳಲ್ಲಿ ನೀರು ಕಡಿಮೆಯಾದರೂ ಸಹ ಅವರು ತೋಡಿದ ಕೆರೆಗಳಲ್ಲಿ ನೀರು ಸಾಕಷ್ಟು ಇರುತ್ತದೆ. ತಮ್ಮ ಕುರಿಗಳನ್ನು ಮತ್ತು ಜಾನುವಾರುಗಳನ್ನು ಮೇಯಿಸುವಾಗ ಪರ್ವತ ಪ್ರದೇಶದ ಕಣಿವೆಗಳಲ್ಲಿ ನೀರು ಸಿಗದೆ ಪರಿತಪಿಸುತ್ತಿರುವ ಪ್ರಾಣಿ-ಪಕ್ಷಿಗಳನ್ನು ಕಂಡು ಕೆರೆಗಳನ್ನು ಅಗೆಯುವ ಆಲೋಚನೆ ಹೊಳೆಯಿತು ಅಂತಾ  ಕಾಮೇಗೌಡರು ಈ ಹೇಳಿದ್ರು..
ಇಷ್ಟೆಲ್ಲ  ಕೆಲಸನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿರುವ ಕಾಮೇಗೌಡ್ರು  “ನನ್ನ ಈ  ಸೇವೆ ಸಣ್ಣದು ಎನ್ನುತ್ತಿದ್ದಾರೆ. ಪ್ರಧಾನಿ ಮೋದಿಯವರು ತಮ್ಮ ಸೇವೆಯನ್ನು ಶ್ಲಾಘಿಸಿರೋದು ಖುಷಿ ಕೊಟ್ಟಿದೆ. ಪ್ರಕೃತಿ ಯನ್ನು ಎಲ್ಲರೂ ಉಳಿಸಿ ಬೆಳೆಸುವಂತೆ ಕಾಮೇಗೌಡರು ಮನವಿ ಮಾಡಿದ್ದಾರೆ.

ಕೇಂದ್ರ ನಾಯಕರ ಅಭಿನಂದನೆ;
ಮಂಡ್ಯದಲ್ಲಿ ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥನೆನಿಸಿಕೊಂಡು ಹೆಸರಾಗಿರುವ ಕಾಮೇಗೌಡರ ಸಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ನಲ್ಲಿ ಕೊಂಡಾಡಿದ್ದರೆ. ಮತ್ತೊಂದೆಡೆ ಕೇಂದ್ರ ಜಲಸಂಪನ್ಮೂಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಮ್ಮ ಟ್ವಿಟ್ಟರ್ ಮೂಲಕ  ಕಾಮೇಗೌಡರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಂಸದ ಪಿಸಿ ಮೋಹನ್ ಟ್ವೀಟ್ ಮಾಡಿ, ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲೂಕಿನ ದಾಸನಡೋಡ್ಡಿ ಗ್ರಾಮದ ಕಾಮೇಗೌಡ ಅವರು ಇಡೀ ಬೆಟ್ಟದ ಪ್ರದೇಶವನ್ನು ಹಸಿರೀಕರಣಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅಸಾಮಾನ್ಯ ವ್ಯಕ್ತಿತ್ವವನ್ನು ಹೊಂದಿದ್ದರೂ ಅವರು ಸಾಮಾನ್ಯ ಕೃಷಿಕರಾಗಿ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರೂ ಕೂಡ, ಪ್ರಧಾನಿ ಮೋದಿಯವರು ಮಂಡ್ಯ ಜಿಲ್ಲೆಯ ಕಾಮೇಗೌಡರನ್ನು, ತಮ್ಮ ಮನದ ಮಾತಿನಲ್ಲಿ ಉಲ್ಲೇಖಿಸಿದ್ದಾರೆ, ಕೆರೆಗಳನ್ನು ಕಟ್ಟಿ ಸಂರಕ್ಷಿಸುವ ಅವರ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಜೀ. ” ಕಾಮೇಗೌಡರು ಕಟ್ಟಿರುವ ಈ ಕೆರೆಗಳು ಬಹಳ ದೊಡ್ಡದಾಗಿರಲಿಕ್ಕಿಲ್ಲ, ಆದರೆ, ಅವರ ಪ್ರಯತ್ನ ಬಹಳ ದೊಡ್ಡದು” ಎಂದು ಮೆಚ್ಚುಗೆ.ವ್ಯಕ್ತಪಡಿಸಿದ್ದಾರೆ. 

ಒಟ್ಟಾರೆ ಮಂಡ್ಯದ ಕಲ್ಮನೆ ಕಾಮೇಗೌಡರು  ತಮ್ಮ ಪರಿಸರ ಕಾಳಜಿಯ ಕಾರ್ಯದಿಂದ ಇದೀಗ ರಾಷ್ಟ್ರದ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಅಲ್ಲದೇ ಸ್ವತಃ ಪ್ರಧಾನಿ ಮೋದಿಯಿಂದ ಪ್ರಶಂಸೆ ಪಡೆದಿರುವುದು ಸಕ್ಕರೆನಾಡಿನ ಗರಿಮೆಗೆ ಮತ್ತೊಂದು ಗೌರವ ತಂದುಕೊಟ್ಟಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×