Breaking News

ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿ ‘ಕೋವಿಡ್ ರಕ್ಷಾ’ಗೆ ಸಂಸದ ತೇಜಸ್ವೀ ಸೂರ್ಯ, ಸಚಿವ ಆರ್ ಅಶೋಕ್ ಚಾಲನೆ

ಬೆಂಗಳೂರು: ಕೋವಿಡ್-19 ಸಂಬಂಧಿತ ಸಮಸ್ಯೆಗಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ‘ಕೋವಿಡ್ ರಕ್ಷಾ’ ಎನ್ನುವ ವಿನೂತನ ಕಾರ್ಯಯೋಜನೆಗೆ ಜು.31 ರಂದು ಚಾಲನೆ ನೀಡಲಾಗಿದೆ.

ಕಂದಾಯ ಸಚಿವರು, ಬೆಂಗಳೂರು ದಕ್ಷಿಣ ವ್ಯಾಪ್ತಿಯ ಕೋವಿಡ್-19 ನಿರ್ವಹಣಾ ಉಸ್ತುವಾರಿಗಳಾದ ಆರ್ ಅಶೋಕ್ ಸಮ್ಮುಖದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವೀ ಸೂರ್ಯ ‘ಕೋವಿಡ್ ರಕ್ಷಾ ಯೋಜನೆಗೆ ಚಾಲನೆ ನೀಡಿದ್ದಾರೆ. 

ಈ ಕಾರ್ಯಯೋಜನೆಯ ಅನುಸಾರ ಬೆಂಗಳೂರು ದಕ್ಷಿಣ ಸಂಸದರ ಕಚೇರಿಯು ಸಹಾಯವಾಣಿ 080 6191 4960 ಸಂಖ್ಯೆ ಚಾಲನೆಯಲ್ಲಿರಲಿದ್ದು, ಫೋನ್ ಅಥವಾ ವಾಟ್ಸಪ್ ಮೂಲಕ ಕೋವಿಡ್-19 ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರು ಟೆಲಿ/ವಿಡಿಯೋ ಸಮಾಲೋಚನೆ ಮೂಲಕ ಪರಿಹಾರ ಒದಗಿಸಲಿದ್ದಾರೆ.

‘ಇ-ಡಾಕ್ಟರ್’ಗಳು ಕೋವಿಡ್ -19ಗೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲಿದ್ದು, ಟೆಸ್ಟ್ ಮಾಡಿಸಿಕೊಳ್ಳುವ, ಹೋಮ್ ಕ್ವಾರಂಟೈನ್ ಕುರಿತು ಅಥವಾ ಆಸ್ಪತ್ರೆಗಳ ಮಾಹಿತಿ ಒದಗಿಸಲಿದ್ದು, ರೋಗಿಗಳಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಸೌಲಭ್ಯ ಒದಗಿಸುವಲ್ಲಿಯೂ ಸಹಾಯ ನೀಡಲಿದೆ.

‘ಕೋವಿಡ್ ರಕ್ಷಾ’ ಗೆ ಕರೆ ಮಾಡುವ ರೋಗಿಗಳಿಗೆ ಸಮೀಪದ ಆಸ್ಪತ್ರೆ/ ಫೀವರ್ ಕ್ಲಿನಿಕ್ ಗಳಲ್ಲಿನ ಸೌಲಭ್ಯಗಳ ಮಾಹಿತಿಯು ಸಹ ದೊರೆಯಲಿದೆ.

” ಕೋವಿಡ್ ಗೆ ಸಂಬಂಧಿಸಿದಂತೆ ಆಸ್ಪತ್ರೆಗಳು, ರೋಗಿಗಳು ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಒಂದೇ ವೇದಿಕೆಯಡಿ ಕಲ್ಪಿಸಿ, ರೋಗಿಗಳು ಕೋವಿಡ್ ಸಂಬಂಧಿಸಿದ ಸಮಾಲೋಚನೆಗೆ ನುರಿತ ವೈದ್ಯರೊಂದಿಗೆ ನೇರ ಸಂಪರ್ಕ ಕಲ್ಪಿಸಿದರೆ ಅತ್ಯಂತ ಸಹಕಾರಿಯಾಗಲಿದೆ. ಡಿಜಿಟಲ್ ತಂತ್ರಜ್ಞಾನದ ಸಹಾಯದೊಂದಿಗೆ ಮನೆಯಲ್ಲೇ ಕುಳಿತುಕೊಂಡು ರೋಗಿಗಳು ನೇರವಾಗಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ, ತಮ್ಮ ಸಂದೇಹಗಳನ್ನು ಪರಿಹರಿಸಿಕೊಳ್ಳುವುದರೊಂದಿಗೆ, ಅಗತ್ಯವಿದ್ದಲ್ಲಿ ಡೈಗನೊಸ್ಟಿಕ್ಸ್ ಟೆಸ್ಟ್ ಗಳ ಸೇವೆ ಮತ್ತು ಔಷಧಿ ಸಾಮಗ್ರಿಗಳನ್ನು ನೇರವಾಗಿ ಮನೆಗೆ ಪಡೆಯಬಹುದು.” ಎಂದು ‘ಕೋವಿಡ್ ರಕ್ಷಾ’ ಕಾರ್ಯ ಯೋಜನೆಯ ಕುರಿತು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.

ಸಹಾಯವಾಣಿಗೆ ಕರೆ ಮಾಡುವ ಮೂಲಕ ಸಾರ್ವಜನಿಕರು ಐ ವಿ ಆರ್ / ವಾಟ್ಸಾಪ್ ಸೇವೆಯನ್ನು ಬಳಸಿಕೊಂಡು ತಮಗೆ ಬೇಕಾದ ಆಯ್ಕೆಗಳನ್ನು ಅನುಸರಿಸಿ ಕೋವಿಡ್-19 ಕುರಿತಾದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡಿದಲ್ಲಿ ನಮ್ಮ ತಂಡದ ವೈದ್ಯರು ನಿಮ್ಮನ್ನು ಸಂಪರ್ಕಿಸಲಿದ್ದು ಕರೊನಾ ಟೆಸ್ಟ್, ಹೋಮ್ ಕ್ವಾರಂಟೈನ್, ಸಮೀಪದ ಫೀವರ್ ಕ್ಲಿನಿಕ್ ಗಳ ಮಾಹಿತಿಯನ್ನು ವಾಟ್ಸಾಪ್/ಕರೆ ಮುಖಾಂತರ ಪಡೆಯಬಹುದು. ಐ.ಸಿ.ಎಂ.ಆರ್ ಮಾರ್ಗದರ್ಶಿ ಸೂತ್ರಗಳ ಅನ್ವಯ ಕಾರ್ಯನಿರ್ವಹಿಸಲಿದ್ದು, ಬೆಂಗಳೂರು ದಕ್ಷಿಣದ ನಾಗರಿಕರು ಐ ವಿ ಆರ್/ ವಾಟ್ಸಾಪ್ ನಲ್ಲಿ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಸಂಭಾಷಣೆ ನಡೆಸಬಹುದು. ಹೆಚ್ಚಿನ ಮಾಹಿತಿಗಾಗಿ COVIDraksha.org ವೆಬ್ ತಾಣವನ್ನು ಸಂಪರ್ಕಿಸಬಹುದು. 

ಸಹಾಯವಾಣಿಗೆ ಕರೆ ಮಾಡುವ ಸಾರ್ವಜನಿಕರು ಐ ವಿ ಆರ್ ಮೂಲಕ ಕೋವಿಡ್-19 ಗೆ ಸಂಬಂಧಿಸಿದಂತೆ ಕೇಳುವ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಅಗತ್ಯವಿದ್ದಲ್ಲಿ ಡಾಕ್ಟರ್ ಒಬ್ಬರ ಜೊತೆ ಸಮಾಲೋಚನೆಗೆ ಒಳಪಡಿಸಲಾಗುತ್ತದೆ. ಹೋಮ್ ಕ್ವಾರಂಟೈನ್ ಗೆ ಒಳಪಡುವ ಕುರಿತು,  ಸಮೀಪದ ಫೀವರ್ ಕ್ಲಿನಿಕ್ ನ ಮಾಹಿತಿ ತಮಗೆ ಸಿಗಲಿದೆ. ವಾಟ್ಸಾಪ್ ಮೂಲಕವೂ ಕೂಡ ಇಂತಹದ್ದೇ ಆಯ್ಕೆಗಳು ಇರಲಿದ್ದು, ಐ.ಸಿ.ಎಂ.ಆರ್ ಮಾರ್ಗದರ್ಶಿ ಸೂಚನೆಗಳ ಅನ್ವಯ ಟೆಕ್ಸ್ಟ್ ಸಂದೇಶಗಳ ಮುಖಾಂತರ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಪ್ರಸ್ತುತ ಬೆಂಗಳೂರು ದಕ್ಷಿಣ ಲೋಕಸಭಾ ವ್ಯಾಪ್ತಿಯಲ್ಲಿ ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಈ ಐ. ವಿ.ಆರ್ ಮತ್ತು ವಾಟ್ಸಾಪ್ ಸೇವೆ ಲಭ್ಯವಿದೆ. ಹೆಚ್ಚಿನ ವಿವರಗಳಿಗೆ COVIDraksha.org ಅನ್ನು ಸಂಪರ್ಕಿಸಬಹುದು.

ಸಾರ್ವಜನಿಕರು ಕೋರಿಕೆ ಸಲ್ಲಿಸಿದ 1 ಗಂಟೆಯೊಳಗಾಗಿ ನಮ್ಮ ತಂಡದ ವೈದ್ಯರು ರೋಗಿಗೆ ಕಾಲ್ ಬ್ಯಾಕ್ ಮಾಡಲಿದ್ದು, ತುರ್ತು ಸನ್ನಿವೇಶದಲ್ಲಿ ಕೇವಲ 15 ನಿಮಿಷಗಳಲ್ಲಿ ಡಾಕ್ಟರ್ ಗಳು ರೋಗಿಯನ್ನು ಸಂಪರ್ಕಿಸಲಿದ್ದಾರೆ.

‘ಕೋವಿಡ್ ರಕ್ಷಾ’ ಮೂಲಕ ಕರೊನಾ ಪಾಜಿಟಿವ್ ಹೊಂದಿರುವ ವ್ಯಕ್ತಿಯು ಡಾಕ್ಟರ್ ರಿಂದ ಕಾಲ್ ಬ್ಯಾಕ್ ಪಡೆಯಲು ಕೋರಿಕೆ ಸಲ್ಲಿಸಿ, ಅವರ ಸೂಚನೆಯ ಮೇರೆಗೆ ತುರ್ತು ಅಗತ್ಯತೆಯೊಂದಿಗೆ ಆಸ್ಪತ್ರೆಗೆ ದಾಖಲಾಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಮನೆಯಲ್ಲಿಯೇ ಟೆಸ್ಟ್ ಮಾಡಿಸಿಕೊಳ್ಳಲು, ಹೋಮ್ ಕ್ವಾರಂಟೈನ್ ಆಗಲು, ಸಮೀಪದ ಫೀವರ್ ಕ್ಲಿನಿಕ್ ಗಳು, ಪ್ರತೀ ವಾರ್ಡ್ ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸ್ವಯಂ ಸೇವಕರ ಮಾಹಿತಿಯನ್ನೂ ಸಹ ‘ಕೋವಿಡ್ ರಕ್ಷಾ’ ಮೂಲಕ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಆರೋಗ್ಯ ಸೇವೆಗಳನ್ನು ಸಾರ್ವಜನಿಕರ ಮನೆಬಾಗಿಲಿಗೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ” ಎಂದು ಕಂದಾಯ ಸಚಿವರಾದ ಆರ್ ಅಶೋಕ್ ಇದೇ ಸಂದರ್ಭದಲ್ಲಿ ತಿಳಿಸಿದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×