Breaking News

ಬೆಂಗಳೂರು :  ತಾಯಿಯ ಅನಾರೋಗ್ಯದ ನೆಪವೊಡ್ಡಿ ಫೇಸ್ಬುಕ್‌ ಸ್ನೇಹಿತರ ಕಾರು ಪಡೆದು ವಂಚನೆ- ವ್ಯಕ್ತಿ ಬಂಧನ

ಬೆಂಗಳೂರು : ಫೇಸ್ಬುಕ್‌ನಲ್ಲಿ ಶ್ರೀಮಂತರನ್ನು ಪರಿಚಯ ಮಾಡಿಕೊಂಡು ತಾಯಿಯ ಅನಾರೋಗ್ಯದ ನೆಪವೊಡ್ಡಿ ಕಾರು ಪಡೆದುಕೊಂಡು ಪರಾರಿಯಾಗುತ್ತಿದ್ದ ಆರೋಪಿಯನ್ನು ಎಚ್‌ಎಎಲ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಬಿ. ನಗರ ನಿವಾಸಿ ಕನಕಪುರ ಮೂಲದ ಚರಣ್‌ ರಾಜ್‌ (33) ಬಂಧಿತ ಆರೋಪಿ.1 ಬೆನ್ಜ್ ಕಾರು ಸೇರಿ 8 ಕಾರುಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ದ ಈತನ ಪತ್ನಿ ಕೂಡಾ ವರದಕ್ಷಿಣೆ ಕಿರುಕುಳದ ಆರೋಪದಡಿ ಪ್ರಕರಣ ದಾಖಲಿಸಿದ್ದರು.

ವಿಮಾನಪುರ ಉದ್ಯಮಿ ಅರುಣ್ ದಾಸ್ ಅವರನ್ನು ಫೇಸ್ಬುಕ್‌ನಲ್ಲಿ ಪರಿಚಯಿಸಿಕೊಂಡಿದ್ದ ಈತ ಮಾ.26ರಂದು ತಾಯಿಗೆ ಅನಾರೋಗ್ಯವಾಗಿದ್ದು, ಆಸ್ಪತ್ರೆಗೆ ಸಾಗಿಸಲು ಕಾರು ನೀಡಬೇಕೆಂದು ಕೇಳಿದ್ದ. ಇದಕ್ಕೆ ಒಪ್ಪಿದ ಅರುಣ್ ದಾಸ್ ಮರುದಿನ ಆತನಿಗೆ ಕಾರು ನೀಡಿದ್ದರು. ಆದರೆ, ಆ ಬಳಿಕ ಕಾರು ಪಡೆದುಕೊಂಡವನು ಪತ್ತೆಯಾದ ಕಾರಣ ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು ಕನಕಪುರದಲ್ಲಿರುವ ಚರಣ್ ರಾಜ್ ನಿವಾಸದಲ್ಲಿ ಆತನನ್ನು ಬಂಧಿಸಿದ್ದಾರೆ.

ಒಂಟಿಯಾಗಿರುವ ಆರೋಪಿ ಫೇಸ್ಬುಕ್‌ನಲ್ಲಿ ಶ್ರೀಮಂತರಿಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿ ಅವರು ಅದನ್ನು ಆಕ್ಸೆಪ್ಟ್ ಮಾಡಿದ ಬಳಿಕ ಮೆಸೆಂಜರ್‌ನಲ್ಲಿ ಚಾಟಿಂಗ್ ನಡೆಸುತ್ತಿದ್ದ. ಒಂದು ತಿಂಗಳ ಕಾಲ ಚಾಟಿಂಗ್ ಮಾಡಿ ಅವರ ವಿಶ್ವಾಸ ಗಳಿಸುತ್ತಿದ್ದ ಆರೋಪಿ ಬಳಿಕ ತನ್ನ ತಾಯಿಗೆ ಅನಾರೋಗ್ಯ ಕಾಡಿದ್ದು, ತುರ್ತಾಗಿ ಕಾರು ನೀಡಬೇಕು. ಮರುದಿನವೇ ವಾಪಾಸ್ ಕೊಡುತ್ತೇನೆ ಎನ್ನುತ್ತಿದ್ದ. ಆದರೆ ಎರಡು-ಮೂರು ದಿನಗಳಾದರೂ ಕಾರು ನೀಡದೆ ಬಳಿಕ ತಲೆಮರೆಸಿಕೊಳ್ಳುತ್ತಿದ್ದ. ಹೀಗೆ ಪಡೆದ ಕಾರನ್ನು ಕಡಿಮೆ ಬೆಲೆಗೆ ಬೇರೆಯವರಿಗೆ ಮಾರಾಟ ಮಾಡಿ ದಾಖಲೆ ಮುಂದೆ ನೀಡುವುದಾಗಿ ಹೇಳುತ್ತಿದ್ದ. ಕಾರನ್ನು ಅವರು ಸ್ವೀಕರಿಸಿದ ಬಳಿಕ ಸಿಮ್ ಕಾರ್ಡ್ ಬದಲಾಯಿಸಿ ಪರಾರಿಯಾಗುತ್ತಿದ್ದ. ಕಾರನ್ನು ಅಡ ಇಟ್ಟು ಕೂಡಾ ಹಣ ಪಡೆಯುತ್ತಿದ್ದ. ಆದರೆ ಬಳಿಕ ಕರೆ ಮಾಡಿದರೆ ಆತ ಸಂಪರ್ಕಕ್ಕೆ ಅಲಭ್ಯವಾಗುತ್ತಿದ್ದ. ಹೀಗೆ ವಂಚಿಸಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಒಎಲ್‌ಎಕ್ಸ್‌ನಲ್ಲಿ ಕಾರು ಮಾರಾಟದ ಜಾಹೀರಾತು ಹಾಕುವವರನ್ನು ಸಂಪರ್ಕಿಸಿ ಕಾರು ಪಡೆದು ಬಳಿಕ ಅದನ್ನು ಅಡ ಇಟ್ಟು ಪರಾರಿಯಾಗುತ್ತಿದ್ದ. ಒಟ್ಟು ಎಂಟು ಮಂದಿಗೆ ಈ ರೀತಿಯ ವಂಚನೆ ಎಸಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×