Breaking News

ಬಂಟ್ವಾಳ : ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸೆಕೆಂಡರಿ ಸ್ಕೂಲ್ ಉದ್ಘಾಟಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಬಂಟ್ವಾಳ : ಬ್ರಿಟಿಷರ ಶಿಕ್ಷಣ ನೀತಿ ನಮ್ಮ ನೆಲಕ್ಕೆ ಪೂರಕವಾಗಿಲ್ಲ ಎಂದು ಬದಲಾವಣೆ ತೀರ್ಮಾನಿಸಿ ಎನ್ ಇಪಿ ಜಾರಿಗೆ ತರಲಾಗಿದೆ. ವ್ಯಕ್ತಿಯನ್ನು ಸ್ವಾವಲಂಬಿ ಮಾಡಬೇಕಾದ ಶಿಕ್ಷಣ ಎಲ್ಲಿಗೆ ಬಂದಿದೆ.

ಸ್ವಾಭಿಮಾನಿ ಬದುಕುವ ಧೈರ್ಯ ಕಲ್ಪಿಸುವುದು ಶಿಕ್ಷಣದಿಂದ ಮಾತ್ರ ಸಾಧ್ಯವಿದೆ. ಗುರುಕುಲ ಶಿಕ್ಷಣ ಅಂತಹ ಧೈರ್ಯವನ್ನು ಕಲಿಸುತ್ತಿತ್ತು. ಸ್ವಾಭಿಮಾನಿ, ಸ್ವಾವಲಂಬಿ ಜೀವನ ಕಲ್ಪಿಸುವ ಸರ್ವ ಶಿಕ್ಷಣ ಅಭಿಯಾನವನ್ನು ವಾಜಪೇಯಿ ಅವರು ಅನುಷ್ಠಾನಕ್ಕೆ ತಂದಿದ್ದರು’ ಎಂದು ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಶ್ರೀರಾಮ ಸೆಕೆಂಡರಿ ಸ್ಕೂಲ್ ಉದ್ಘಾಟಿಸಿ ಮಾತನಾಡಿದರು.

ಇನ್ನು ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ ‘ಶಿಕ್ಷಣ ವ್ಯವಸ್ಥೆಯ ಬಗ್ಗೆ ಕೂಡಾ ಹಲವಾರು ಜನ ಗಲಾಟೆ ಎಬ್ಬಿಸುತ್ತಾರೆ.

ನಮ್ಮ ದೇಶದಲ್ಲಿ ವಿಜ್ಞಾನಿಗಳು, ಖ್ಯಾತ ವೈದ್ಯರು , ಖಗೋಳಶಾಸ್ತ್ರಜ್ಞರು ಹೀಗೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಇದ್ದಾರೆ. ಅದನ್ನು ನಮ್ಮ ಮಕ್ಕಳಿಗೆ ತಿಳಿಸಿದರೆ ಅದರಿಂದ ತುಂಬಾನೇ ಲಾಭವಿದೆ. ಅದು ಅವರು ಕೂಡಾ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ‘ಬರೀ ಸಂಪಾದನೆ ಸೀಮಿತವಾಗಿದ್ದ ಶಿಕ್ಷಣ ನೀತಿಯನ್ನು ಮೋದಿ ನೇತೃತ್ವದ ಸರಕಾರ ಬದುಕನ್ನು ಕಲಿಸುವ ಕೌಶಲ್ಯಗಳನ್ನು ಭೋಧಿಸುವ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ.

ಇದರ ಜತೆಗೆ ಅಗ್ನಿಪಥ ಎಂಬ ಅದ್ಬುತ ಕಲ್ಪನೆಯ ಮೂಲಕ ರಕ್ಷಣಾ ಕ್ಷೇತ್ರಕ್ಕೆ ಮೋದಿ ಸರಕಾರ ದೊಡ್ಡ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.

ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ಬಂಟ್ವಾಳ ತಹಶೀಲ್ದಾರ್ ಡಾ. ಸ್ಮಿತಾ ರಾಮು, ಕಾರ್ಕಳದ ಉದ್ಯಮಿ ಉದಯಕುಮಾರ್ ಶೆಟ್ಟಿ ಮುನಿಯಾಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ ಎನ್., ಡಾ.ಕಮಲಾ ಪ್ರಭಾಕರ ಭಟ್, ಬಿಜೆಪಿ ದ.ಕ.ಜಿಲಾಧ್ಯಕ್ಷ ಸುದರ್ಶನ್ ಎಂ, ಡಿಡಿಪಿಐ ಸುಧಾಕರ್, ಬಿಇಒ ಜ್ಞಾನೇಶ್ ಎಂ.ಪಿ. ಉಪಸ್ಥಿತರಿದ್ದರು. ಭಗವದ್ಗೀತೆ ಕಂಠಪಾಠ ಮಾಡಿದ ವಿದ್ಯಾರ್ಥಿನಿ ವಾಸವಿ ಕೆ.ಸಿ.ಅವರನ್ನು ಗೌರವಿಸಲಾಯಿತು.
.

Follow us on Social media

About the author