Breaking News

ಚತ್ತೀಸ್ ಘಡದಲ್ಲಿ ಭೀಕರ ಅಪಘಾತ; ಡಿವೈಡರ್ ಗೆ ಗುದ್ದಿದ ಕಾರು ನೇರ ವಿದ್ಯುತ್ ಕಂಬಕ್ಕೆ ಢಿಕ್ಕಿ, ಪ್ರಯಾಣಿಕರು ಪವಾಡ ಸದೃಶ ಪಾರು!

ರಾಯ್ಪುರ: ಜೀವ ಗಟ್ಟಿ ಇದ್ದರೆ ಯಮ ಕೂಡ ಏನೂ ಮಾಡಲಾರ ಎಂಬುದಕ್ಕೆ ಚತ್ತೀಸ್ ಘಡದಲ್ಲಿ ನಡೆದ ಭೀಕರ ಅಪಘಾತವೊಂದು ಸಾಕ್ಷಿಯಂತಿದ್ದು, ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿ ಗಾಳಿಯಲ್ಲಿ ನೇರವಾಗಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಆದರೂ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೌದು.. ಚತ್ತೀಸ್ ಘಡದ ರಾಯ್ಪುರದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ಧಮ್ಟಾರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವೇಗವಾಗಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಕಾರು ಸುಮಾರು 10 ಅಡಿ ಮೇಲಕ್ಕೆ ಹಾರಿ ರಸ್ತೆ ಪಕ್ಕದಲ್ಲಿದ್ದ ಹೈ ಟೆನ್ಷನ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. 

ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು ಅಲ್ಲಿನ ಹೈ ಟೆನ್ಷನ್ ವೈರ್ ಗಳ ನಡುವೆಯೇ ಸಿಲುಕಿ ನೇರ ವಿದ್ಯುತ್ ಕಂಬದಲ್ಲಿ ಸಿಲುಕಿಕೊಂಡಿದೆ. ಅದೃಷ್ಟವಶಾತ್ ಅಪಘಾತ ನಡೆದ ಸಂದರ್ಭದಲ್ಲಿ ಕಂಬದಲ್ಲಿ ವಿದ್ಯುತ್ ಪ್ರಸರಣ ನಿಂತಿರ ಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಅಲ್ಲಿ ಯಾವುದೇ ದುರಂತ ಸಂಭವಿಸಿಲ್ಲ. ಒಂದೇ ವೇಳೆ ಕಂಬದಲ್ಲಿ ವಿದ್ಯುತ್ ಪ್ರಸರಣ ಇದ್ದಿದ್ದರೆ ಕಾರು ಢಿಕ್ಕಿಯ ರಭಸಕ್ಕೆ ಬೆಂಕಿ ಉತ್ಪತ್ತಿಯಾಗಿ ಬೆಂಕಿ ಕಾರಿನ ಇಂಧನ ಟ್ಯಾಂಕ್ ಗೆ ವ್ಯಾಪಿಸಿ ಕಾರಿನಲ್ಲಿದ್ದ ಎಲ್ಲರೂ ಸುಟ್ಟು ಕರಕಲಾಗುವ ಅಪಾಯವಿತ್ತು. ಆದರೆ ಅದೃಷ್ಟವಶಾತ್ ಹಾಗೆ ಆಗಿಲ್ಲ.

ಇನ್ನು ಇಷ್ಟು ದೊಡ್ಡ ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ. ಸ್ಥಳೀಯರು ಈ ದೃಶ್ಯ ನೋಡಿ ಯಾವುದೋ ಸಿನಿಮಾ ಚಿತ್ರೀಕರಣವಿರಬೇಕು ಎಂದು ಭಾವಿಸಿದ್ದರು. ಆದರೆ ಬಳಿಕ ಇದು ನಿಜವಾದ ಅಪಘಾತ ಎಂದು ತಿಳಿದು ಕಾರಿನಲ್ಲಿದ್ದವರ ರಕ್ಷಣೆಗೆ ಧಾವಿಸಿದ್ದಾರೆ. ಕೆಲ ಕ್ಷಣಗಳ ಬಳಿಕ ಸ್ಥಳೀಯರು ಕಾರಿನಲ್ಲಿದ್ದವರನ್ನು ರಕ್ಷಣೆ ಮಾಡಿದ್ದು, ಸಣ್ಣ ಪುಟ್ಟ ಗಾಯಗಳನ್ನು ಹೊರತು ಪಡಿಸಿದರೆ ಕಾರಿನಲ್ಲಿದ್ದ ಮೂವರೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ಅಪಘಾತದಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 4 ಗಂಟೆಗಳ ಕಾಲ ವಿದ್ಯುತ್ ಸೇವೆ ಸ್ಥಗಿತಗೊಂಡಿತ್ತು.

ಪ್ರಸ್ತುತ ಘಟನಾ ಸ್ಥಳಕ್ಕೆ ಧಮ್ಟಾರಿ ಜಿಲ್ಲೆ ಹೆಚ್ಚುವರಿ ಪೊಲೀಸ್ ಎಸ್ ಪಿ ಮನೀಷ್ ಠಾಕೂರ್ ಅವರು ಭೇಟಿ ನೀಡಿದ್ದು, ಕಾರು ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×