ವಾರಾಣಸಿ: ಕೊರೋನಾ ತಡೆಗೆ ವಾರಾಣಸಿ ಕೈಗೊಂಡ ಕ್ರಮಗಳು, ಜನಭಾಗಿತ್ವ, ಎನ್ ಜಿಒ ಗಳ ಸಹಕಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಜು.09 ರಂದು ವಾರಾಣಸಿ ಮೂಲದ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್-19ನ್ನು ನಿರ್ವಹಿಸುವಲ್ಲಿ, ಅಗತ್ಯವಿದ್ದ ಜನರಿಗೆ ಸಹಾಯ ಮಾಡಿರುವ ಎನ್ ಜಿಒ ಗಳು, ಜನರು, ಅಧಿಕಾರಿಗಳ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೊರೋನಾ ತಡೆಗೆ ವಿಧಿಸಲಾಗಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರೆ ನೀಡಿದ್ದಾರೆ.
ಕಾಶಿ ಕೊರೋನಾ ವೈರಸ್ ಸೋಂಕು ಪ್ರಸರಣವನ್ನು ಸಮರ್ಥವಾಗಿ ತಡೆದಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ 24 ಕೋಟಿ ಜನಸಂಖ್ಯೆ ಇರುವ ಉತ್ತರ ಪ್ರದೇಶ ಕೋವಿಡ್-19 ಪ್ರಸರಣ ವೇಗಕ್ಕೆ ಕಡಿವಾಣ ಹಾಕಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೊರೋನಾ ಪೀಡಿತರು ವೇಗವಾಗಿ ಗುಣಮುಖರಾಗುತ್ತಿದ್ದಾರೆ ಎಂದೂ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶಕ್ಕೆ ಜನಸಂಖ್ಯೆಯಲ್ಲಿ ಸರಿಸಮವಾಗಿರುವ ಬ್ರೆಜಿಲ್ ನ್ನು ಹೋಲಿಕೆ ಮಾಡಿದ್ದು, ಬ್ರೆಜಿಲ್ ನಲ್ಲಿ ಸಾವಿರಾರು ಜನರು ಕೋವಿಡ್-19 ಕಾರಣದಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಆದರೆ ಅಷ್ಟೇ ಜನಸಂಖ್ಯೆಯುಳ್ಳ ಉತ್ತರ ಪ್ರದೇಶದಲ್ಲಿ ಸಾವಿನ ಸಂಖ್ಯೆ 800 ಕ್ಕೆ ನಿಯಂತ್ರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಆತ್ಮನಿರ್ಭರ ಭಾರತದ ಬಗ್ಗೆಯೂ ಪ್ರಧಾನಿ ಮೋದಿ ಮಾತನಾಡಿದ್ದು, ವಾರಾಣಸಿ ಎಕ್ಸ್ಪೋರ್ಟ್ ಹಬ್ ಆಗಬಹುದಾಗಿದ್ದು ಮುಂದಿನ ದಿನಗಳಲ್ಲಿ ಆತ್ಮನಿರ್ಭರ ಭಾರತ ಅಭಿಯಾನದ ಕೇಂದ್ರವಾಗಲಿದೆ ಎಂದು ಹೇಳಿದ್ದಾರೆ.
Follow us on Social media