Breaking News

ಐಪಿಎಲ್ ನಿಂದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಕೈ ಬಿಟ್ಟಿದ್ದ ಬಿಸಿಸಿಐಗೆ ಭಾರಿ ದಂಡ?

ಹೈದರಾಬಾದ್: 2012ರ ಐಪಿಎಲ್ ಟೂರ್ನಿಯಿಂದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಕೈಬಿಟ್ಟಿದ್ದ ಬಿಸಿಸಿಐಗೆ ಭಾರಿ ದಂಡ ಹೇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಬಗ್ಗೆ ಕ್ರೀಡಾ ಪತ್ರಿಕೆಯೊಂದು ವರದಿ ಮಾಡಿದ್ದು, ಐಪಿಎಲ್ ನಿಯಮಾವಳಿಗಳನ್ನು ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಫ್ರಾಂಚೈಸಿಗಳು ಮುರಿದಿದ್ದಾರೆ ಎಂದು ಆರೋಪಿಸಿ 2012ರ ಐಪಿಎಲ್ ಟೂರ್ನಿಯಿಂದ ಬಿಸಿಸಿಐ ತಂಡವನ್ನು ಕೈ ಬಿಟ್ಟಿತ್ತು. ಬಿಸಿಸಿಐನ ಈ ನಡೆಯಿಂದಾಗಿ ತಂಡದ ಫ್ರಾಂಚೈಸಿಗಳಿಗೆ ಭಾರಿ ಪ್ರಮಾಣದ ನಷ್ಟ ಉಂಟಾಗಿತ್ತು. ಬಿಸಿಸಿಐ ನಡೆಯನ್ನು ಪ್ರಶ್ನಿಸಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಫ್ರಾಂಚೈಸಿಗಳು ಹಾಗೂ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು.

ಇದೀಗ ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್ ಮಧ್ಯಸ್ಥಿಕೆ ನ್ಯಾಯಮಂಡಳಿಯು ಬಿಸಿಸಿಐನ ನಡೆ ತಪ್ಪು ಎಂಬ ತೀರ್ಮಾನಕ್ಕೆ ಬಂದಿದೆ. ಅಲ್ಲದೆ  ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಫ್ರಾಂಚೈಸಿಗಳು ಹಾಗೂ ಮಾಲೀಕರಿಗೆ ನಷ್ಟ ತುಂಬಿ ಕೊಡುವಂತೆ ಬಿಸಿಸಿಐಗೆ ಸೂಚನೆ ನೀಡಿದೆ. ಈ ನಷ್ಟದಲ್ಲಿ ಮಾಲೀಕರಿಗೆ ಆದ ನಷ್ಟವನ್ನು ಬಡ್ಡಿ ಸಹಿತ ತುಂಬಿಸಿ ಕೊಡುವಂತೆ ಮಧ್ಯಸ್ಥಿಕೆ ನ್ಯಾಯಮಂಡಳಿ ಆದೇಶ ನೀಡಿದೆ ಎನ್ನಲಾಗಿದೆ. ಈ ಹಾನಿ ಪ್ರಮಾಣ ಸುಮಾರು 4814.67ಕೋ. ರೂಗಳಾಗಿದೆ ಎಂದು ಆಂದಾಜಿಸಲಾಗಿದ್ದು, ಐಪಿಎಲ್ ಇತಿಹಾಸದಲ್ಲಿಯೇ ಇದು ಅತೀ ದೊಡ್ಡ ನಷ್ಟ ಪರಿಹಾರವಾಗಿದೆ ಎಂದೂ ವಿಶ್ಸೇಷಿಸಲಾಗುತ್ತಿದೆ.  

ಈ ಬಗ್ಗೆ ಮಾಹಿತಿ ನೀಡಿದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡದ ಪರ ವಕೀಲರಾದ ಧೀರ್ ಅಂಡ್ ಧೀರ್ ಅಸೋಸಿಯೇಟ್ಸ್ ಸಂಸ್ಥೆ, 2012ರ ಆಗಸ್ಟ್ 11ರಂದು ಬಿಸಿಸಿಐ ತಮ್ಮ ಕಕ್ಷೀದಾರರಾದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು ಟೂರ್ನಿಯಿಂದ ಅಮಾನತು ಮಾಡಿತ್ತು. ತಂಡದ ಫ್ರಾಂಚೈಸಿಗಳು ನಿಯಮಾವಳಿಗಳನ್ನು ಗಾಳಿಗೆ ತೂರಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿತ್ತು ಎಂದು ಆರೋಪಿಸಿ ತಂಡದ ಫ್ರಾಂಚೈಸಿಯನ್ನು 2 ವರ್ಷಗಳ ಕಾಲ ಅಮಾನತು ಮಾಡಿದ್ದಲ್ಲದೇ ತಂಡಕ್ಕೆ ದಂಡ ಕೂಡ ಹಾಕಿತ್ತು.  ಈ ಬಗ್ಗೆ ಪ್ರತಿಕ್ರಿಯೆ ನೀಡಲು 30 ದಿನಗಳ ಕಾಲಾವಕಾಶ ನೀಡಲಾಗಿತ್ತಾದರೂ 29 ದಿನಗಳಿಗೇ ಬಿಸಿಸಿಐ ಅಮಾನತು ನಿರ್ಧಾರ ಕೈಗೊಂಡಿತ್ತು.  30ನೇ ದಿನ ತಂಡದ ಮಾಲೀಕರು ಈ ವ್ಯಾಜ್ಯೆ ಪರಿಹರಿಸಿಕೊಳ್ಳಲು ಮುಂದಾಗಿದ್ದಾರದಾರೂ, ಇದಕ್ಕೆ ಬಿಸಿಸಿಐ ಮನ್ನಣೆ ನೀಡಲಿಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ಡೆಕ್ಕನ್ ಚಾರ್ಜರ್ಸ್ ತಂಡ ಬಾಂಬೇ ಹೈಕೋರ್ಟ್ ಮೊರೆ ಹೋಗಿತ್ತು. ಈ ಪ್ರಕರಣದ ವಿಚಾರಣೆಗೆ ಬಾಂಬೇ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿಕೆ ಠಾಕೂರ್ ಅವರನ್ನು ಮಧ್ಯಸ್ಥಿಕೆ ನ್ಯಾಯಮೂರ್ತಿಗಳಾಗಿ ನೇಮಿಸಿತ್ತು. ಈ ವೇಳೆ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಫ್ರಾಂಚೈಸಿ ಅಮಾನತಿನಿಂದಾಗಿ ತಮಗೆ 6,046 ಕೋಟಿ ರೂಗಳ ನಷ್ಟವಾಗಿದ್ದು, ಇದನ್ನು ಬಡ್ಡಿ ಸಹಿತಿ ಬಿಸಿಸಿಐ ಹಿಂದುರುಗಿಸಬೇಕು ಎಂದು ಮನವಿ ಮಾಡಿತ್ತು. 

2017ರಲ್ಲಿ ವಿಚಾರಣೆ ಪೂರ್ಣಗೊಳಿಸಿದ್ದ ಬಾಂಬೇ ಹೈಕೋರ್ಟ್ ಬಳಿಕ ನಡೆದ ಸುದೀರ್ಘ ವಿಚಾರಣೆ ಬಳಿಕ ಇಂದು ತನ್ನ ಅಂತಿಮ ಆದೇಶ ನೀಡಿದೆ.  ಅದೇಶದಲ್ಲಿ ಬಿಸಿಸಿಐ ಅಂತಿಮ ಗಡುವು ಮುಕ್ತಾಯವಾಗುವುದರೊಳಗೇ ತಂಡದ ಫ್ರಾಂಚೈಸಿಯನ್ನು ಅಮಾನತು ಮಾಡಿದೆ. ಇದು ಒಪ್ಪಂದಕ್ಕೆ ವಿರೋಧದವಾದದ್ದು. ತಂಡದ ಮಾಲೀಕರಿಗೆ ಪ್ರತಿಕ್ರಿಯೆ ನೀಡಲು ಅಥವಾ ಅಂತಿಮ ನಿರ್ಣಯ ಕೈಗೊಳ್ಳುವ ಮುನ್ನ ಸಂಪೂರ್ಣ ಕಾಲಾವಕಾಶ ಬಳಕೆಗೆ ಅವಕಾಶ ನೀಡಬೇಕಿತ್ತು ಎಂದು ಹೇಳಿದೆ. 

ಅಲ್ಲದೆ ತಂಡಕ್ಕೆ4,814.67 ಕೂಟಿ ರೂ ಪರಿಹಾರ ಮೊತ್ತವನ್ನು ಶೇ10ರಷ್ಟು ಬಡ್ಡಿಯಂತೆ ನೀಡಬೇಕು. ಅಲ್ಲದೆ ವಿಚಾರಣೆಗಾಗಿ ತಂಡ ಖರ್ಚು ಮಾಡಿರುವ 50 ಲಕ್ಷ ರೂಗಳನ್ನು ಬಿಸಿಸಿಐ ಭರಿಸಬೇಕು ಎಂದು ಹೇಳಿದೆ. ಅಲ್ಲದೆ ಬಿಸಿಸಿಐ ಕೂಡ ಈ ಆದೇಶವನ್ನು ಪ್ರಶ್ನಿಸುವ ಅವಕಾಶವನ್ನು ಕೋರ್ಟ್ ನೀಡಿದೆ.

ಇನ್ನು ಈ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×