ಮಂಗಳೂರು: ನಾಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಸಬಾ ಬೆಂಗರೆ ನಿವಾಸಿ ಹೈದರ್ ಆಲಿ (38) ಮೃತ ದುರ್ದೈವಿ.
ಹೈದರಾಲಿ ನಿನ್ನೆ ಬೆಳಗ್ಗೆ ತನ್ನ ಸಹವರ್ತಿಗಳಾದ ಆಸಿಫ್ ಎಚ್, ಫರಾಝ್, ಇಮ್ರಾನ್, ಮತ್ತು ಅನ್ವರ್ ಅವರೊಂದಿಗೆ ಬೆಳಗ್ಗೆ 5 ಗಂಟೆಗೆ ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು.
ಉಳ್ಳಾಲ ಕೋಡಿಯಿಂದ ಸಮುದ್ರಕ್ಕೆ ಸುಮಾರು 14 ಮಾರು ದೂರದಲ್ಲಿ ಸುಮಾರು 7.30ರ ಹೊತ್ತಿಗೆ ತಲುಪಿದ್ದು, ಬಲೆ ಬೀಸುತ್ತಿದ್ದಾಗ ಸಿಡಿಲು – ಮಿಂಚು ಆರಂಭಗೊಂಡಿದ್ದು ಹೈದರಾಲಿಗೆ ಸಿಡಿಲು ಬಡಿದಿತ್ತು.
ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಹೈದರಾಲಿಯನ್ನು ತತ್ಕ್ಷಣ ಸಹವರ್ತಿಗಳು ದೋಣಿಯಲ್ಲಿ ದಡಕ್ಕೆ ತಂದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಮೃತಪಟ್ಟಿರುವುದನ್ನು ದೃಢೀಕರಿಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಹೈದರಾಲಿ ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
Follow us on Social media



 
  
  
  
  
  
 