Breaking News

ಮಂಗಳೂರು : ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್: ಕೆಜಿಗೆ 350ರೂ ನಿಂದ 400ರೂ

ಮಂಗಳೂರು : ಕರಾವಳಿ ಪ್ರಮುಖ ಬೆಳೆ ಅಡಿಕೆ, ಲಕ್ಷಾಂತರ ಕೃಷಿಕರು ಅಡಿಕೆ ಬೆಳೆಯನ್ನೇ ನಂಬಿಕೊಂಡು ಜೀವ ನಡೆಸುತ್ತಿದ್ದಾರೆ, ಇಂತಹ ರೈತಾಪಿ ವರ್ಗಕ್ಕೆ ಲಾಕ್ ಡೌನ್ ನಂತರ ಗುಡ್ ನ್ಯೂಸ್ ಒಂದು ಬಂದಿದೆ. ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಬೇಡಿಕೆ ಹೆಚ್ಚಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅಡಿಕೆ ಧಾರಣೆಯು ಕೆಜಿಗೆ 350, 400 ಆಗುವ ನಿರೀಕ್ಷೆ ಹೆಚ್ಚಾಗಿದೆ.

ಲಾಕ್ ಡೌನ್ ನಿಂದ ಕಂಗೆಟ್ಟ ಕೃಷಿಕರ ಮುಖದಲ್ಲಿ‌ ಮಂದಹಾಸ ಮೂಡಿದೆ. ಭಾರಿ‌ ಪ್ರಮಾಣದಲ್ಲಿ ಅಡಿಕೆಯ ಕೊರತೆ ಇದ್ದು, ಅಡಿಕೆಯ ಕ್ರಯ ಉತ್ತುಂಗಕ್ಕೆ ಏರಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ. ಕಳೆದ ವರ್ಷ ಫಸಲಿನ ಸಮಯದಲ್ಲಿ ಕೊಳೆರೋಗ, ವಾತಾವರಣದ ಪ್ರತಿಕೂಲ ಪರಿಣಾಮದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅಡಿಕೆಯ ಫಸಲು ಪಡೆಯಲು ಕೃಷಿಕರಿಗೆ ಸಾಧ್ಯವಾಗಿರಲಿಲ್ಲ, ಹಾಗೂ ದೊಡ್ಡ ಪ್ರಮಾಣದ ಬೆಲೆಯೂ ಲಭಿಸಿರಲಿಲ್ಲ, ಈ ಕಾರಣದಿಂದಾಗಿ ಗುಜರಾತ್ ಸೇರಿದಂತೆ ಉತ್ತರ ಭಾರತದ ದಾಸ್ತಾನು ಕೇಂದ್ರಗಳಲ್ಲಿ ಅಡಿಕೆ ಸಂಗ್ರಹ ಕಡಿಮೆ ಆಗಿ ಬೇಡಿಕೆ ಹೆಚ್ಚಿರುವುದು ಕೂಡ ಧಾರಣೆ ಜಿಗಿತಕ್ಕೆ ಕಾರಣ ಎಂದು ಹೇಳಲಾಗಿದ್ದರೂ, ಅಡಿಕೆಯ ಆಮದಿಗೆ ನಿಷೇಧ ಮತ್ತು ಲಾಕ್ ‌ಡೌನ್‌ ಪರಿಣಾಮ ಉಂಟಾದ ಬದಲಾವಣೆ ಕೂಡ ಧಾರಣೆ ಏರಿಕೆಗೆ ಕಾರಣವೆನ್ನಬಹುದು.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೃಷಿಕರಿಗೆ ಹೆಚ್ಚು ಖರ್ಚು ಕಂಡುಬಂದಿಲ್ಲ. ಮನೆಯವರೆಲ್ಲಾ ಮನೆಯಲ್ಲೇ ಇದ್ದ ಪರಿಣಾಮ ಈ ಅವಧಿಯ ಕೃಷಿ ಚಟುವಟಿಕೆಗಳನ್ನು ಮನೆಮಂದಿಯೇ ನಿಭಾಯಿಸಿದ್ದಾರೆ. ಶುಭ ಸಮಾರಂಭಗಳೂ ನಡೆದಿಲ್ಲ, ಯಾವುದೇ ದೂರ ಪ್ರಯಾಣವೂ ಇರಲಿಲ್ಲ ಹಾಗಾಗಿ ಕೃಷಿ ಕೂಲಿಯಾಳುಗಳ ಸಂಬಳ ಸೇರಿದಂತೆ ಯಾವುದೇ ಹೆಚ್ಚು ಖರ್ಚುಗಳಾಗಿಲ್ಲ. ಹಾಗಾಗಿ ಅಡಿಕೆ ಮಾರಾಟ ಮಾಡುವ ಪ್ರಮೇಯ ಬಂದಿರಲಿಲ್ಲ.

ಮೇ‌ನಲ್ಲಿ ಧಾರಣೆ ಒಮ್ಮೆ ಏರಿಕೆಯಾಗಿ ಮತ್ತೆ ಕಡಿಮೆಯಾಗಿತ್ತು. ಈ ಅವಧಿಯಲ್ಲಿ ಹೆಚ್ಚು ಅಡಿಕೆ ಮಾರುಕಟ್ಟೆಗೆ ಬಂದಿತ್ತು. ಧಾರಣೆ ಇಳಿಕೆಯ ಆತಂಕದಿಂದ ಅಡಿಕೆ ಮಾರಾಟ ಮಾಡುದ್ದರು. ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಪೂರೈಕೆ ಇಲ್ಲ, ಹೀಗಾಗಿ ಬೆಲೆ ಏರಿಕೆಯಾಗಿದೆ.

ಜೂನ್‌ ತಿಂಗಳ ಮೊದಲವಾರದಲ್ಲಿ 300 ರೂ. ಗಡಿ ದಾಟಿದ್ದು, ಅಡಿಕೆ ಕೊರತೆ ಕಾರಣ ಈ ಬಾರಿ ಧಾರಣೆ 350 ರಿಂದ 400ರೂ. ತನಕ ಏರುವ ನಿರೀಕ್ಷೆಯಿದೆ. ಇದು ಕೃಷಿಕರಲ್ಲಿ ಸಂತಸ ತಂದಿದೆ.

Follow us on Social media

About the author