Breaking News

ಕೊರೋನಾ ಸೋಂಕಿತರಿಗೆ ಮತ್ತಷ್ಟು ಹಾಸಿಗೆ ಮೀಸಲು; ಖಾಸಗಿ ಆಸ್ಪತ್ರೆಗಳೊಂದಿಗೆ ಇಂದು ಸಿಎಂ ಯಡಿಯೂರಪ್ಪ ಸಭೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗಾಗಲೇ ಹಾಸಿಗೆಗಳ ಕೊರತೆ ಎದುರಾಗತೊಡಗಿದೆ. ಹೀಗಾಗಿ ಸೋಂಕಿತರಿಗೆ ಹಾಸಿಗೆಗಳ ಮೀಸಲಿಡುವ ಕುರಿತು ಖಾಸಗಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಜೊತೆಗೆ ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಬೆ ನಡೆಸಿ ಮಾತುಕತೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
 
ಸರ್ಕಾರಿ ಆಸ್ಪತ್ರೆಗಳು 5 ಸಾವಿರ ಹಾಸಿಗೆಗಳನ್ನು ನೀಡಬೇಕಿತ್ತು. ಆದರೆ, ಈ ವರೆಗೂ ಅಷ್ಟು ಹಾಸಿಗೆಗಳನ್ನು ನೀಡಿಲ್ಲ. ಇದರಿಂದ ಬಹುತೇಕರಿಗೆ ಆರೋಗ್ಯ ಸೇವೆ ದೊರೆಯದಂತಾಗಿದೆ. ಹೀಗಾಗಿ ಪರಸ್ಪರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಈ ಕ್ರಮ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. 

ಇಂದು ಮಧ್ಯಾಹ್ನ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಕೊರೋನಾ ನಿರ್ವಹಣೆ ಕುರಿತು ಖಾಸಗಿ ಆಸ್ಪತ್ರೆಗಳ ಅಧಿಕಾರಿಗಳಿಂದ ಸಲಹೆ ಹಾಗೂ ತಂತ್ರಗಳನ್ನು ಕೇಳಲಿದ್ದಾರೆಂದು ಮೂಲಗಳು ತಿಳಿಸಿವೆ. 

ಸಭೆಯಲ್ಲಿ ಈಗಾಗಲೇ ನಗರದಲ್ಲಿ ಕೊರೋನಾ ನಿರ್ವಹಣೆಗೆ ನಿಯೋಜನೆಗೊಳಿಸಿರುವ 8 ಮಂದಿ ಸಚಿವರೂ ಕೂಡ ಭಾಗಿಯಾಗಲಿದ್ದಾರೆ. ಈಗಾಗಲೇ ಸೋಂಕಿತರಿಗೆ ಹಾಸಿಕೆಗಳು ಸಿಗದೆ ನೂರಾರು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಚಿವರು ಒತ್ತಡದಲ್ಲಿದ್ದು, ಈ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ನಡೆಸಯಲಿದೆ ಎಂದು ಹೇಳಲಾಗುತ್ತಿದೆ. 

Follow us on Social media

About the author