Breaking News

ಕುಡಿದ ಮತ್ತಿನಲ್ಲಿ ಹಾವನ್ನು ಕಚ್ಚಿ ಕೊಂದು ಜೈಲು ಸೇರಿದ ಭೂಪ!

ಕೋಲಾರ: ವಿಲಕ್ಷಣ ರೀತಿಯಲ್ಲಿ ಕೋಲಾರದಲ್ಲೊಬ್ಬ ವ್ಯಕ್ತಿ ಹಾವನ್ನು ಕಚ್ಚಿ ಕೊಂದಿದ್ದು ಅದನ್ನು ವಿಡಿಯೊ ಮಾಡಿದವರು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಅದು ವೈರಲ್ ಆಗಿದೆ.

ಇದನ್ನು ಗಮನಿಸಿದ ಕೋಲಾರ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಸ್ವಯಂಪ್ರೇರಿತ ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಆರೋಪಿಯನ್ನು ಕೆಜಿಎಫ್ ಕೋರ್ಟ್ ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಯಿತು.

ವಿಡಿಯೊದಲ್ಲಿ ವ್ಯಕ್ತಿ ಮಾರ್ಗ ಮಧ್ಯೆ ಬೈಕ್ ಮೇಲೆ ಕುಳಿತು ಹಾವನ್ನು ಕಚ್ಚಿ ತುಂಡು ಮಾಡಿ ಹಾಕುತ್ತಿದ್ದಾನೆ. ಗ್ರಾಮಸ್ಥರು ಹೇಳುವ ಪ್ರಕಾರ, ವ್ಯಕ್ತಿ ಮುಳಬಾಗಿಲಿನ ಮುಸ್ತೂರು ಗ್ರಾಮದ ತನ್ನ ಮನೆಗೆ ಬೈಕ್ ನಲ್ಲಿ ಹಿಂತಿರುಗುವಾಗ ಮಾರ್ಗದಲ್ಲಿ ಹಾವನ್ನು ಕಂಡು ಅದನ್ನು ಹಿಡಿದಿದ್ದಾನೆ. ಕೂಡಲೇ ಅದನ್ನು ಕೊಂದು ಬಾಯಲ್ಲಿ ಕಚ್ಚಿ ತುಂಡು ತುಂಡು ಮಾಡಿ ಹಾಕಿದ್ದಾನೆ.

ಆರೋಪಿಯನ್ನು 33 ವರ್ಷದ ಶಿವ ಕುಮಾರ್ ಎಂದು ಗುರುತಿಸಲಾಗಿದೆ. ಆತ ಕೊಂದ ಹಾವು ಇಲಿ ಹಾವು ಎಂಬುದಾಗಿದ್ದು ಅದು ವನ್ಯಜೀವಿ ಕಾಯ್ದೆಯ ರಕ್ಷಣೆಯಡಿ ಬರುತ್ತದೆ ಎಂದು ಚಕ್ರಪಾಣಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ.

Follow us on Social media

About the author