ಸಮುದ್ರ ಒಮ್ಮೊಮ್ಮೆ ಶಾಂತ.. ಮತ್ತೊಮ್ಮೆ ರೌದ್ರ.. ಆದ್ರೆ, ಕಡಲಿನ ರೌದ್ರತೆಯ ಅರಿವಿಲ್ಲದೇ ಅದರ ಮಡಿಲಲ್ಲಿ ಇಳಿದ್ರೆ ಮಸಣ ಸೇರೋದು ಖಚಿತ. ಇದೀಗ ಕಡಲಿನ ಸೆಳೆತದ ಸುಳಿವೂ ಇಲ್ಲದೇ ತೀರದಲ್ಲಿ ಆಟವಾಡಲು ಹೋದ ಯುವತಿಯರು ಸಾವಿನ ಮನೆಯ ಕದ ತಟ್ಟಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಚಾರಣಕ್ಕೆ ಅಂತ ತೆರಳಿದ್ದ ಯುವತಿಯರು ನೀರುಪಾಲಾಗಿದ್ದಾರೆ. ಸಮುದ್ರದ ಪಕ್ಕದಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಹುಚ್ಚಿಗೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಗೋಕರ್ಣದ ಜಟಾಯು ತೀರ್ಥಕ್ಕೆ ತಮಿಳನಾಡು ತಿರುಚಿಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕೊನೆಯ ವರ್ಷದ ಪರೀಕ್ಷೆ ಮುಗಿಸಿ ಬಂದ 23 ವಿದ್ಯಾರ್ಥಿಗಳ ತಂಡ ಚಾರಣಕ್ಕೆ ಅಂತ ಬಂದಿತ್ತು.
ಈ ತಂಡದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಜಟಾಯು ತೀರ್ಥದ ಸಮುದ್ರದ ಅಂಚಿನಲ್ಲಿರೋ ಬಂಡೆ ಮೇಲೆ ಕೂತಿದ್ದಾರೆ. ತಮ್ಮ ಸಾವು ಸಮೀಪದಲ್ಲೇ ಇದೆ ಎಂಬ ಪರಿವೂ ಇಲ್ಲದೇ ಕಡಲ ಅಲೆಗಳ ಆರ್ಭಟವನ್ನ ಎಂಜಾಯ್ ಮಾಡುತ್ತಿದ್ದರು. ಅಷ್ಟರಲ್ಲೇ ಸಂಭವಿಸಿದ್ದು ದುರಂತ.
ಸಮುದ್ರದ ಅಂಚಿನಲ್ಲಿ ಕೂತಿದ್ದ ನಾಲ್ವರು ವಿದ್ಯಾರ್ಥಿನಿಯರತ್ತ ಆಳೆತ್ತರದ ಅಲೆಗಳು ನುಗ್ಗಿ ಬಂದಿವೆ. ರಭಸವಾಗಿ ಬಂದು ಯುವತಿಯರು ಕೂತಿದ್ದ ಬಂಡೆಗೆ ಅಪ್ಪಳಿಸಿದೆ. ಇದೇ ವೇಳೆ ಬಂಡೆಗಳ ಮೇಲೆ ಕೂತಿದ್ದ ನಾಲ್ವರು ವಿದ್ಯಾರ್ಥಿನಿಯರು ನೀರಲ್ಲಿ ಕೊಚ್ಚಿ ಹೋಗಿದ್ದಾರೆ.
ಅದರಲ್ಲಿ ಸಿಂದುಜಾ ಮತ್ತು ಕನ್ನಿಮೊಳಿ ಎಂಬ ಇಬ್ಬರು ಯುವತಿಯರು ನೀರುಪಾಲಾಗಿದ್ದಾರೆ. ಸ್ಥಳದಲ್ಲೇ ಮುಳುಗಿ ದಾರುಣವಾಗಿ ಅಂತ್ಯಕಂಡಿದ್ದಾರೆ. ಇನ್ನೂ ಇಬ್ಬರು ಯುವತಿಯರು ನೀರಲ್ಲಿ ಮುಳುಗಿ ಹೋಗುತ್ತಿರುವಾಗ ಸ್ಥಳಕ್ಕೆ ರಕ್ಷಣಾ ಪಡೆಯ ಮಷಿನ್ ಬೋಟ್ ಬಂದು ಅವರನ್ನ ಕಾಪಾಡಿದೆ.
ಇನ್ನೂ ಮೃತರ ದೇಹವನ್ನ ಸ್ಥಳೀಯ ಆಸ್ಪತ್ರೆಗೆ ತರಲಾಗಿತ್ತು. ಅಲ್ಲದೇ ಗಾಯಗೊಂಡಿದ್ದ ಇಬ್ಬರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯ್ತು. ಈ ವೇಳೆ ತಮ್ಮ ಸ್ನೇಹಿತರನ್ನ ಕಳೆದುಕೊಂಡು ಆಸ್ಪತ್ರೆಯಲ್ಲಿ ಸಹಪಾಠಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ಅಪಾಯದ ಅರಿವಿಲ್ಲದೇ ಸಮುದ್ರ ತೀರಕ್ಕೆ ಹೋಗುವ ಮುನ್ನ ಎಚ್ಚರದಿಂದ ಇರಬೇಕಿದೆ. ಅಪಾಯವನ್ನ ಲೆಕ್ಕಿಸದೇ ಹುಡುಗಾಟಿಕೆ ನೆಪದಲ್ಲಿ ಹೋದ್ರೆ ಇದೇ ರೀತಿಯ ಅನಾಹುತ ಕಟ್ಟಿಟ್ಟ ಬುತ್ತಿ.
Follow us on Social media