Breaking News

ಚಿಕ್ಕಮಗಳೂರು : ಅಪಘಾತದಲ್ಲಿ ಯುವತಿ ನಿಧನ ಸಾವಲ್ಲೂ ಸಾರ್ಥಕತೆ ಮೆರೆದು 9 ಜನರ ಬಾಳಿಗೆ ಬೆಳಕಾದ ರಕ್ಷಿತಾ

ಚಿಕ್ಕಮಗಳೂರು: ನಗರದ ಎಐಟಿ ವೃತ್ತದ ಸಮೀಪ ಬಸ್‌ ಇಳಿಯುವಾಗ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಮಿದುಳು ನಿಷ್ಕ್ರಿಯಗೊಂಡಿದ್ದ ಯುವತಿ ರಕ್ಷಿತಾ ಅವರು ಸಾವಲ್ಲೂ ಸಾರ್ಥಕತೆ ಮೆರೆದು 9 ಜನರ ಬಾಳಿಗೆ ಬೆಳಕಾಗಿದ್ದಾಳೆ.

ರಕ್ಷಿತಾಳ(17) ಅಂಗಾಂಗಗಳನ್ನು ತೆಗೆದು, ಅಗತ್ಯ ಇದ್ದವರಿಗೆ ಜೋಡಣೆಗೆ ರವಾನಿಸಲಾಗಿದೆ. ಪುತ್ರಿಯ ಸಾವಿನಿಂದಾಗಿ ತೀವ್ರ ದುಃಖವಾಗಿದೆ. ಅಂಗಾಂಗ ದಾನ ಮೂಲಕ ಸ್ವಲ್ಪ ಸಾರ್ಥಕತೆ ಭಾವ ಮೂಡಿದೆ ಎಂದು ರಕ್ಷಿತಾ ತಾಯಿ ಲಕ್ಷ್ಮಿಬಾಯಿ ಪ್ರತಿಕ್ರಿಯಿಸಿದ್ದಾರೆ.

ರಕ್ಷಿತಾ ಅವರ ಅಂಗಾಂಗ ದಾನಕ್ಕೆ ಪೋಷಕರ ಸಮ್ಮತಿ ಪಡೆದು ಜಿಲ್ಲಾಸ್ಪತ್ರೆಯಲ್ಲಿ ಪ್ರಕ್ರಿಯೆ ನಡೆಸಲಾಯಿತು. ತಜ್ಞರ ತಂಡವು ಬೆಳಿಗ್ಗೆ 8 ರಿಂದ ಮಧ್ಯಾಹ್ನದ 1 ಗಂಟೆವರೆಗೆ ಅಂಗಾಂಗಗಳನ್ನು ತೆಗೆಯುವ ಪ್ರಕ್ರಿಯೆ ನಡೆಸಿತು.ಹೃದಯವನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ಹೆಲಿಕಾಪ್ಟರ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಒಯ್ಯಲಾಯಿತು. ಯಕೃತ್ತನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಹಾಗೂ ಮೂತ್ರಕೋಶವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕಳಿಸಲಾಯಿತು.

ಆಂಬುಲೆನ್ಸ್‌ ಸಂಚಾರಕ್ಕೆ ಜಿರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಕಣ್ಣುಗಳನ್ನು ಕೂಡ ದಾನಮಾಡಲಾಗಿದೆ.

ಅಂಗಾಂಗ ತೆಗೆದ ಬಳಿಕ ರಕ್ಷಿತಾಳ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು. ಯುವತಿ ಓದುತ್ತಿದ್ದ ನಗರದ ಬಸವನಹಳ್ಳಿಯ ಪಿಯು ಕಾಲೇಜಿನ ಆವರಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಸಾರ್ವಜನಿಕರು, ವಿದ್ಯಾರ್ಥಿಗಳು, ಸಿಬ್ಬಂದಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ರಕ್ಷಿತಾ ಅವರು ಕಡೂರು ತಾಲ್ಲೂಕಿನ ಸೋಮನಹಳ್ಳಿ ತಾಂಡ್ಯದವರು.

ಶೇಖರ್‌ ನಾಯಕ್‌ ಮತ್ತು ಲಕ್ಷ್ಮಿ ಬಾಯಿ ದಂಪತಿ ಪುತ್ರಿ. ನಗರ ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ.

ಇದೇ 18ರಂದು ಎಐಟಿ ವೃತ್ತದ ಸಮೀಪದಲ್ಲಿ ಬಸ್‌ನಿಂದ ಇಳಿಯುವಾಗ ಅಪಘಾತ ಸಂಭವಿಸಿತ್ತು. ಅವರು ತೀವ್ರವಾಗಿ ಗಾಯಗೊಂಡಿದ್ದರು.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×