Breaking News

ಸೋಂಕಿತರ ಜೊತೆ ಬೇಕಂತಲೇ ಕೆಲವರಿಗೆ ಬಲವಂತದ ಕ್ವಾರೆಂಟೈನ್: ಡಿಕೆಶಿ ಗಂಭೀರ ಆರೋಪ

ಬಳ್ಳಾರಿ: ಕೋವಿಡ್ ಆಸ್ಪತ್ರೆಯಲ್ಲಿ ನಡೆಯುವ ಹಗರಣಗಳು ಹಾಗೂ ಅಲ್ಲಿನ ಎಷ್ಟೋ ಜನರ ನೋವಿನ ಕುರಿತು ಸಿನಿಮಾ ನಿರ್ಮಿಸಬಹು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್ , ಕೋವಿಡ್ ನಿಂದ ಇಡೀ ದೇಶವೇ ನೋವಿನಿಂದ ನರಳುತ್ತಿದೆ. ಕೊರೊನಾ ವಿಚಾರದಲ್ಲಿ ಜನರಿಗೆ ನೆರವಾಗಲು ಸರ್ಕಾರಕ್ಕೆ ನಾವು ಪಕ್ಷಭೇದ ಮರೆತು ಸಹಕಾರ ನೀಡಿದ್ದೇವೆ. ಪ್ರಧಾನಿ ಮೋದಿ ಹೇಳಿದಂತೆ ದೀಪವನ್ನೂ ಹಚ್ಚಿ, ಗಂಟೆಯನ್ನು ಭಾರಿಸಿ, ಅವರು ಹೇಳಿದಂತೆಲ್ಲ ಕುಣಿದಿದ್ದೇವೆ. ಆದರೂ ಸರ್ಕಾರಗಳು ಕೊರೊನಾ ನಿಯಂತ್ರಿಸುವಲ್ಲಿ ವಿಫಲವಾಗಿವೆ ಎಂದು ಟೀಕಾಪ್ರಹಾರ ನಡೆಸಿದರು.

 ಕೊವಿಡ್ ಪಾಸಿಟಿವ್ ಇರುವ ಮಾಜಿ ಮಂತ್ರಿಯೊಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹದಿನೇಳು ಲಕ್ಷ ರೂ. ಬಿಲ್ ಬಂದಿದೆ. ಮಾಜಿ ಮಂತ್ರಿ, ಹಾಲಿ ಸಚಿವರೇ ಇಷ್ಟೊಂದು ಭಾರಿ ಮೊತ್ತವನ್ನು ಪಾವತಿಸಬೇಕು ಎಂದಾದರೆ ಇನ್ನು ಜನಸಾಮಾನ್ಯರ ಗತಿಯೇನು?ಎಂದು ಪ್ರಶ್ನಿಸಿದರು.

ಕೋವಿಡ್ ಆರಂಭದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಬಂದ್ ಮಾಡದೇ ವಿದೇಶಿಗರನ್ನು ದೇಶದೊಳಗೆ ಬಿಟ್ಟು ರೋಗವನ್ನು ಇಡೀ ದೇಶಕ್ಕೆ ಹಂಚಿದ್ದೇ ಸರ್ಕಾರ. ಸೋಂಕಿತರ ಜೊತೆ ಬೇಕಂತಲೇ ಕೆಲವರನ್ನು ಬಲವಂತವಾಗಿ ಕ್ವಾರೆಂಟೈನ್ ಮಾಡಲಾಗುತ್ತಿದೆ. ಕೋವಿಡ್ ಈಗ ಸರ್ಕಾರಕ್ಕೆ ವಸೂಲಿ ದಂಧೆಯಾದರೆ ಮತ್ತೊಂದೆಡೆ ವೈದ್ಯಕೀಯ ಕಿಟ್ ಖರೀದಿಯಲ್ಲಿ ಭಾರಿ ಅವ್ಯವಹಾರವಾಗಿದೆ. ಖಾಸಗಿ ಆಸ್ಪತ್ರೆಗಳು ರೋಗಿಗಳು ಕೊರೊನಾ ಹೆಸರಿನಲ್ಲಿ ಸುಲಿಗೆ ಮಾಡುತ್ತಿವೆ. ಸರ್ಕಾರವೇ ಕೊರೊನಾ ಸಂಕಷ್ಟದ ಜವಾಬ್ದಾರಿ ಹೊರಬೇಕೆಂದು ಡಿ.ಕೆ.ಶಿವಕುಮಾರ್ ಹೇಳಿದರು.

ಸಚಿವ ಈಶ್ವರಪ್ಪ ಅವರನ್ನು ಬಂಧಿಸಿ

ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪ ವಿರುದ್ಧ ಪೊಲೀಸ್ ಅಧಿಕಾರಿಗಳು ಸುಮೋಟೋ ಪ್ರಕರಣದಡಿ ಕೂಡಲೇ ಬಂಧಿಸಬೇಕು ಅಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜೀನಾಮೆಯನ್ನು ತಕ್ಷಣ ಪಡೆಯಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

“ಕಾಶಿ ಮಥುರಾದ ಮಸೀದಿಗಳು ಇಂದಲ್ಲ ನಾಳೆ ಧ್ವಂಸವಾಗುತ್ತವೆ ಎಂದಿರುವ ಈಶ್ವರಪ್ಪ ಒಬ್ಬ ಜವಾಬ್ದಾರಿಯುತ ಮಂತ್ರಿಯಾಗಿದ್ದು ಇಂತಹಾ ಹೇಳಿಕೆ ನೀಡಿರುವುದು ಎಷ್ಟು ಸರಿ? ಜನರ ನಡುಬೆ ದ್ವೇಷ ಬಿತ್ತುವ ಇಂತಹಾ ಹೇಳಿಕೆ ನಿಡಿರುವ ಸಚಿವರನ್ನು ತಕ್ಷಣ ಬಂಧಿಸಬೇಕು.” ಕೆಪಿಸಿಸಿ ಅಧ್ಯಕ್ಷ ಹೇಳಿದ್ದಾರೆ.

Follow us on Social media

About the author