Breaking News

ರಕ್ಷಾ ಬಂಧನ್: ಸಹೋದರಿ ಮಾತಿಗೆ ತಲೆಬಾಗಿ ಪೊಲೀಸರಿಗೆ ಶರಣಾದ ನಕ್ಸಲ್!

ದಾಂತೇವಾಡ: ರಕ್ಷಾ ಬಂಧನ್ ಶುಭ ಸಂದರ್ಭದಲ್ಲಿ ಮತ್ತೆ ಕಾಡಿಗೆ ವಾಪಸ್ ಹೋಗದಂತೆ ಸಹೋದರಿ ಮಾಡಿದ ಮನವಿಗೆ ತಲೆಬಾಗಿದ ನಕ್ಸಲ್ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ. ಈತನ ತಲೆಗೆ 8 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು.

ದಂತವಾಡ ಜಿಲ್ಲೆಯ ಪಾಲ್ನಾರ್ ಹಳ್ಳಿಯ ಮಲ್ಲ ಪೊಲೀಸರಿಗೆ ಶರಣಾದ ನಕ್ಸಲ್. 12ನೇ ವಯಸ್ಸಿನಲ್ಲಿ ಮನೆಯಿಂದ ಓಡಿ ಹೋಗಿ ನಕ್ಸಲ್ ಗುಂಪು ಸೇರಿದ್ದ ಈತ 14 ವರ್ಷದ ನಂತರ ಮನೆಗೆ ವಾಪಸ್ಸಾಗಿದ್ದಾನೆ.

ಈ ಎಲ್ಲಾ ವರ್ಷಗಳಲ್ಲಿ ತನ್ನ ಸಹೋದರಿ ಲಿಂಗೇಯನ್ನು ನೋಡದ ಮಲ್ಲ, ಇಂದು ತಂಗಿ ನೋಡಲು ಮನೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಲಿಂಗೇ ,ಭದ್ರತಾ ಪಡೆಗಳ ನಕ್ಸಲ್ ನಿಗ್ರಹ ಕಾರ್ಯದಲ್ಲಿ ಹಲವು ನಕ್ಸಲರು ಪ್ರಾಣ ಕಳೆದುಕೊಂಡಿದ್ದು, ತನ್ನ ಸಹೋದರನ ಪ್ರಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು,   ಮತ್ತೆ ಕಾಡಿಗೆ ಹೋಗದೆ ಪೊಲೀಸರಿಗೆ ಶರಣಾಗುವಂತೆ ಮನವಿ
ಮಾಡಿಕೊಂಡಿದ್ದಾಳೆ. 

ಬೈರಾಂಘಢ ಪ್ರದೇಶದಲ್ಲಿ ಈವರೆಗೂ ನಕ್ಸಲ್ ತುಕಡಿಯ ಕಮಾಂಡರ್ ಆಗಿದ್ದ ಮಲ್ಲ, ಪೊಲೀಸರ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಎಂದು ದಾಂತೇವಾಡ ಎಸ್ಪಿ ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.

ನಕ್ಸಲರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಯೋಜನೆಯಡಿ ಆತ ಈಗಷ್ಟೇ ಶರಣಾಗಿದ್ದು, ಅಪರಾಧ ಕೃತ್ಯಗಳ ಮಾಹಿತಿ
ಇನ್ನೂ ತಿಳಿದುಬಂದಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

Follow us on Social media

About the author