Breaking News

ಕೊರೋನಾ ವೈರಸ್: ಸುರತ್ಕಲ್‌ ನಲ್ಲಿ ಯುವಕ ಸಾವು: ಪರೀಕ್ಷೆಯಲ್ಲಿ ಕೋವಿಡ್‌19 ನೆಗೆಟಿವ್; ಜನತೆ ನಿರಾಳ

ಮಂಗಳೂರು: ಮಂಗಳೂರಿನ ಸುರತ್ಕಲ್‌ ನಲ್ಲಿ ತೀವ್ರ ಆಂತಕಕ್ಕೆ ಕಾರಣವಾಗಿದ್ದ ಯುವಕನ ಸಾವು ಕೊರೋನಾ ಸೋಂಕಿನಿಂದ ಸಂಭವಿಸಿಲ್ಲ ಎಂಬುದು ದೃಢಪಟ್ಟಿದ್ದು, ಕೋವಿಡ್ 19 ಪರಿಕ್ಷಾ ವರದಿಯಲ್ಲಿ ನೆಗೆಟಿವ್ ಎಂದು ಬಂದಿದೆ.

ಈ ಬಗ್ಗೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದ ಯುವಕನ ಸಾವು ಕೊರೋನಾ ಸೋಂಕಿನಿಂದ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಗ್ಯಾಧಿಕಾರಿಗಳ ಮಾಹಿತಿ ಬಳಿಕ ಅಂತಕ್ಕೀಡಾಗಿದ್ದ ಸ್ಥಳೀಯರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ.

ಏನಿದು ಘಟನೆ?
ಸುರತ್ಕಲ್ ಸಮೀಪದ ಇಡ್ಯದ 28 ವರ್ಷದ ಯುವಕ ‌ನಿನ್ನೆ ಮೃತಪಟ್ಟಿದ್ದು, ಈತನಿಗೆ ‌ಎರಡು ದಿನಗಳ ಹಿಂದೆ ಮಲಬದ್ಧತೆ ಮತ್ತು ಹೊಟ್ಟೆನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಮಂಗಳವಾರ ತೀವ್ರ ಹೊಟ್ಟೆನೋವು ‌ಕಾಣಿಸಿಕೊಂಡಿದ್ದರಿಂದ ಯುವಕನನ್ನು ನಗರದ ಖಾಸಗಿ ಆಸ್ಪತ್ರೆಗೆ  ಆ್ಯಂಬುಲೆನ್ಸ್‌ನಲ್ಲಿ ಸಾಗಿಸಿದ್ದು, ಆದರೆ ಆಸ್ಪತ್ರೆಗೆ ಸೇರುವ ಮುನ್ನವೇ ಯುವಕ ಮೃತಪಟ್ಟಿದ್ದ. ಆದರೆ, ಎಲ್ಲೆಡೆ ಕೊರೋನಾ ವೈರಸ್ ಹರಡುತ್ತಿರುವ ಸಂದರ್ಭದಲ್ಲೇ ಯುವಕ ಮೃತಪಟ್ಟಿದ್ದರಿಂದ ಜಿಲ್ಲಾಡಳಿತದ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಯವರು ಕೊರೋನಾ ವೈರಸ್ ರೋಗಕ್ಕೆ  ಸಂಬಂಧಿಸಿ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದರು. ಇಂದು ಯುವಕನ ವೈದ್ಯಕೀಯ ವರದಿ ಬಂದಿದ್ದು, ವರದಿಯಲ್ಲಿ ಕೋವಿಡ್ ನೆಗೆಟಿವ್ ಬಂದಿದೆ.

Follow us on Social media

About the author