Breaking News

ಕೇರಳ : ಮೊಬೈಲ್‌ ಫೋನ್‌ ಸ್ಫೋಟಗೊಂಡು 8 ವರ್ಷದ ಬಾಲಕಿ ಮೃತ್ಯು

ತ್ರಿಶೂರು : ಮೊಬೈಲ್‌ ಫೋನ್‌ ಸ್ಫೋಟಗೊಂಡು 8 ವರ್ಷ ಪ್ರಾಯದ ಬಾಲಕಿ ಮೃತ ಪಟ್ಟ ಘಟನೆ ಕೇರಳದ ತೃಶೂರಿನ ತಿರುವಿಲ್ವಾಮಲ ಎಂಬಲ್ಲಿ ನಡೆದಿದೆ.

ತೃಶೂರಿನ ಪಝಯನ್ನೂರು ಬ್ಲಾಕ್‌ ಪಂಚಾಯತಿನ ಮಾಜಿ ಸದಸ್ಯ ಪತ್ತಿಪರಂಬು ನಿವಾಸಿ ಅಶೋಕ್‌ ಕುಮಾರ್‌ ಮತ್ತು ಸೌಮ್ಯಾ ದಂಪತಿಯ ಪುತ್ರಿ 3 ನೇ ತರಗತಿಯ ವಿದ್ಯಾರ್ಥಿನಿ ಆದಿತ್ಯಶ್ರೀ ಮೃತ ಪಟ್ಟ ಬಾಲಕಿ.

ಸೋಮವಾರ ರಾತ್ರಿ ಆದಿತ್ಯಶ್ರೀ ಮೊಬೈಲ್‌ ಫೋನ್‌ನ್ನು ಕೈಯಲ್ಲಿ ಹಿಡಿದುಕೊಂಡು ವೀಡಿಯೋ ವೀಕ್ಷಣೆ ಮಾಡುತ್ತಿದ್ದಾಗ ದಿಢೀರನೆ ಮೊಬೈಲ್‌ ಫೋನ್‌ಸೆಟ್‌ ಸ್ಫೋಟಗೊಂಡಿದೆ.

ಇದರ ಪರಿಣಾಮವಾಗಿ ಬಾಲಕಿಯ ದೇಹಕ್ಕೆ ಅಲ್ಲಲ್ಲಿ ಗಾಯಗಳಾಗಿದ್ದು, ಅಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾಳೆ.

ವೀಡಿಯೋ ನೋಡುತ್ತಿದ್ದಾಗ ಮೊಬೈಲ್‌ ನ ಬ್ಯಾಟರಿ ಹೆಚ್ಚು ಬಿಸಿಯಾಗಿ ಅದು ಸ್ಫೋಟಗೊಂಡಿರ ಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಈ ಮೊಬೈಲ್‌ ಫೋನ್‌ ಖರೀದಿಸಿದ್ದು, ಒಂದು ವರ್ಷದ ಹಿಂದೆ ಬ್ಯಾಟರಿಯನ್ನು ಬದಲಾಯಿಸಲಾಗಿತ್ತು. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ತೆರಳಿ ಸ್ಫೋಟಕ್ಕೆ ನಿಜವಾದ ಕಾರಣವೇನಿರ ಬಹುದೆಂದು ತನಿಖೆ ನಡೆಸುತ್ತಿದ್ದಾರೆ.

Follow us on Social media

About the author