Breaking News

ವಸತಿ ಯೋಜನೆಗಳ ಜಾರಿ – 3 ತಿಂಗಳೊಳಗೆ ಸಾಲ ಮಂಜೂರು ಮಾಡುವಂತೆ ಬಿಎಸ್‌ವೈ ಸೂಚನೆ

ಬೆಂಗಳೂರು : ಪ್ರಧಾನಮಂತ್ರಿ ಆವಾಸ್‌ ಹಾಗೂ ಮುಖ್ಯಮಂತ್ರಿ ಅವರ ಒಂದು ಲಕ್ಷ ಮನೆ ಸೇರಿದಂತೆ ನಗರ ಪ್ರದೇಶಗಳಲ್ಲಿನ ವಸತಿ ಯೋಜನೆ ಫಲಾನುಭವಿಗಳಿಗೆ 3 ತಿಂಗಳೊಳಗೆ ಸಾಲ ಮಂಜೂರು ಮಾಡುವಂತೆ ಪ್ರಮುಖ ಬ್ಯಾಂಕ್‌ಗಳಿಗೆ ಸಿಎಂ ಬಿ.ಎಸ್‌‌.ಯಡಿಯೂರಪ್ಪ ಅವರು ಸೂಚಿಸಿದ್ದಾರೆ.

ಪ್ರಧಾನಮಂತ್ರಿ ಸ್ವನಿಧಿ, ಪ್ರಧಾನಮಂತ್ರಿ ಆವಾಸ್ ಮತ್ತು ಮುಖ್ಯಮಂತ್ರಿಯವರ ಒಂದು ಲಕ್ಷ ಮನೆಗಳ ಪ್ರಗತಿಗೆ ಸಂಬಂಧಿಸಿದಂತೆ ಗುರುವಾರ ವಿಧಾನಸೌಧದಲ್ಲಿ ಸಭೆ ನಡೆಸಿದ ಅವರು, “ಸಾಲ ಮಂಜೂರನ್ನು ಮೂರು ತಿಂಗಳೊಳಗೆ ಮಾಡದೇ ಇದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಮಾತನಾಡಿದ ವಸತಿ ಸಚಿವ ವಿ. ಸೋಮಣ್ಣ ಅವರು, “ಬ್ಯಾಂಕ್‌ಗಳು ವಸತಿ ಯೋಜನೆಗಳ ಸಾಲ ಮಂಜೂರು ಮಾಡಲು ನಿತ್ಯ ತಕರಾರು ಮಾಡುತ್ತಿದ್ದವು. ಇನ್ನು ಮುಂದೆ ಫಲಾನುಭವಿಗಳ ಆಧಾರ್‌ ಕಾರ್ಡ್‌‌ ಹಾಗೂ ಹಕ್ಕುಪತ್ರದ ಆಧಾರದ ಮೇಲೆ ಸಾಲ ಮಂಜೂರು ಮಾಡುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸಿಎಂ ಅವರು ಸೂಚನೆ ನೀಡಿದ್ದಾರೆ” ಎಂದು ಹೇಳಿದರು.

“ಪ್ರತೀ ಫಲಾನುಭವಿಗಳಿಗೆ ಇತರ ನಗರಗಳಲ್ಲಿ 2.5 ಲಕ್ಷ. ರೂ. ಹಾಗೂ ಬೆಂಗಳೂರಿನಲ್ಲಿ ಸ್ವಲ್ಪ ಅಧಿಕ ಮೊತ್ತದ ಸಾಲವನ್ನು ಮಂಜೂರು ಮಾಡುವಂತೆ ಸೂಚಿಸಿದ್ದಾರೆ. ಒಟ್ಟು ಸುಮಾರು 3.40 ಲಕ್ಷ‌ ಫಲಾನುಭವಿಗಳಿಗೆ ಸಾಲ ದೊರೆಯಲಿದೆ” ಎಂದರು.

“ಈಗಾಗಲೇ ಮುಖ್ಯಮಂತ್ರಿ ಒಂದು ಲಕ್ಷ ಮನೆ ಯೋಜನೆಯಲ್ಲಿ 53,000 ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಮೊದಲ ಹಂತದ ಫಲಾನುಭವಿಗಳಿಗೆ ಜೂನ್‌ನಲ್ಲಿ ಮನೆ ಹಂಚಿಕೆ ಮಾಡಲಾಗುವುದು” ಎಂದು ಹೇಳಿದರು.

Follow us on Social media

About the author