Breaking News

ತವರಿನತ್ತ 1,000 ಕಿ.ಮೀ ಸೈಕಲ್ ಪ್ರಯಾಣ- ತಿಂಡಿ ತಿನ್ನಲು ಕುಳಿತಾಗ ಕಾರು ಡಿಕ್ಕಿಯಾಗಿ ವಲಸೆ ಕಾರ್ಮಿಕನ ಧಾರುಣ ಸಾವು

ಲಖನೌ: ಕೊರೋನಾ ಲಾಕ್‍ಡೌನ್ ಪರಿಣಾಮ ತವರಿನತ್ತ ಹೆಜ್ಜೆ ಹಾಕುತ್ತಿದ್ದ ವಲಸೆ ಕಾರ್ಮಿಕನೋರ್ವ ಮಾರ್ಗ ಮಧ್ಯೆ ಬೆಳಗಿನ ತಿಂಡಿ ತಿನ್ನಲು ಕುಳಿತಿದ್ದಾಗ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದು ಆತ ಸಾವನ್ನಪ್ಪಿರುವ ಧಾರುಣ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೇ ಸಾವಿರಾರು ಕಾರ್ಮಿಕರು ನಡೆದುಕೊಂಡು, ಸೈಕಲ್ ಮೂಲಕ ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಇದೇ ರೀತಿ ಉತ್ತರ ಪ್ರದೇಶದಲ್ಲಿ ಕಾರ್ಮಿಕನೊಬ್ಬ ಸೈಕಲ್ ಮೂಲಕ ತನ್ನೂರಿಗೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದು  ಮೃತಪಟ್ಟಿದ್ದಾನೆ. ಮೃತ ಕಾರ್ಮಿಕನನ್ನು ಸಘೀರ್ ಅನ್ಸಾರಿ (26 ವರ್ಷ) ಎಂದು ಗುರುತಿಸಲಾಗಿದೆ. ಅನ್ಸಾರಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ದೆಹಲಿಯಿಂದ ಬಿಹಾರದ ತನ್ನ ಚಂಪಾರಣ್ ಗ್ರಾಮಕ್ಕೆ ಅನ್ಸಾರಿ ಮತ್ತು ಆತನ ಸ್ನೇಹಿತರು ಹೋಗುತ್ತಿದ್ದರು. ಆದರೆ ಲಖನೌ ನಲ್ಲಿ ತಿಂಡಿ  ಮಾಡುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಅನ್ಸಾರಿ ಸಾವನ್ನಪ್ಪಿದ್ದಾರೆ. 

ಏನಿದು ದುರಂತ?
ಕೊರೊನಾ ಲಾಕ್‍ಡೌನ್‍ನಿಂದ ಕೆಲಸ ಇಲ್ಲದೆ ತನ್ನ ಏಳು ಸ್ನೇಹಿತರೊಂದಿಗೆ ಸೈಕಲ್ ಮೂಲಕ ತನ್ನೂರಿಗೆ ಹೋಗಲು ಅನ್ಸಾರಿ ನಿರ್ಧರಿಸಿದ್ದರು. ಅದರಂತೆಯೇ ಎಲ್ಲರೂ ದೆಹಲಿಯಿಂದ ಮೇ 5 ರಂದು ತಮ್ಮ ಊರಿಗೆ ಸೈಕಲ್ ಮೂಲಕ ಹೊರಟಿದ್ದರು. ಐದು ದಿನಗಳ ನಂತರ ಕಾರ್ಮಿಕರು  ಲಖನೌ ತಲುಪಿದ್ದಾರೆ. ಐದು ದಿನಗಳಲ್ಲಿ 1,000 ಕಿಲೋ ಮೀಟರ್ ದೂರ ಸೈಕಲ್ ಮೂಲಕ ಬಂದಿದ್ದರು. ಶನಿವಾರ ಬೆಳಗ್ಗೆ ಸುಮಾರು 10 ಗಂಟೆಗೆ ಬೆಳಗ್ಗಿನ ತಿಂಡಿ ತಿನ್ನಲು ಎಲ್ಲರೂ ಸೈಕಲ್ ನಿಲ್ಲಿಸಿ ರಸ್ತೆ ಬದಿಯ ಡಿವೈಡರ್ ಮೇಲೆ ಕುಳಿತಿದ್ದರು. ಈ ವೇಳೆ ಲಖನೌ ಸಂಖ್ಯೆ ಹೊಂದಿರುವ  ಕಾರು ನಿಯಂತ್ರಣ ಕಳೆದುಕೊಂಡು ವೇಗವಾಗಿ ಬಂದು ಮೊದಲಿಗೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಅನ್ಸಾರಿಗೆ ಡಿಕ್ಕಿ ಹೊಡೆದಿದೆ.

ಹಣ ನಿರಾಕರಿಸಿದ ಸ್ನೇಹಿತರು
ಇನ್ನು ಅಪಘಾತದ ಬಳಿಕ ತಕ್ಷಣ ಕಾರು ಚಾಲಕ ಕಾರಿನಿಂದ ಇಳಿದು ಅವರಿಗೆ ಪರಿಹಾರವಾಗಿ ಹಣವನ್ನು ನೀಡಲು ಮುಂದಾಗಿದ್ದಾನೆ. ಆದರೆ ಅನ್ಸಾರಿ ಸ್ನೇಹಿತರು ಹಣ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ನಂತರ ಅನ್ಸಾರಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ  ಫಲಕಾರಿಯಾಗದೆ ಅನ್ಸಾರಿ ಮೃತಪಟ್ಟಿದ್ದಾರೆ. ಸದ್ಯಕ್ಕೆ ಪೊಲೀಸರು ಚಾಲಕನ ಅಜಾಗರುಕತೆಯಿಂದ ಅಪಘಾತ ಸಂಭವಿಸಿದೆ ಎಂದು ಅಪರಿಚಿತ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Follow us on Social media

About the author